ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಬಳಿಕ ದೈವ ಪಟ್ಟಕ್ಕೇರಿದ್ದಾರೆ. ಅವರೇ ಈಗ ಪಂಜುರ್ಲಿ ದೈವವೇನೋ ಎಂಬ ರೀತಿ ಭಕ್ತರು ನೋಡುತ್ತಿದ್ದಾರೆ. ಇಂತಹ ಅನುಭವ ಈ ಹಿಂದೆಯೂ ಕೆಲವು ಕಲಾವಿದರಿಗೆ ಆಗಿದೆ.
ಡಾ.ರಾಜಕುಮಾರ್ ರಾಘವೇಂಧ್ರ ಸ್ವಾಮಿ ಪಾತ್ರದಲ್ಲಿ ನಟಿಸಿದ್ದಾಗ ಅವರನ್ನು ಸಾಕ್ಷಾತ್ ರಾಘವೇಂದ್ರ ಸ್ವಾಮಿಯಾಗಿಯೇ ನೋಡಿದ್ದರು. ಅವರು ಜೀವನದ ಕೊನೆಯವರೆಗೂ ಆ ಗೌರವವನ್ನು ಉಳಿಸಿಕೊಂಡೇ ಇದ್ದರು.
ಆ ಮಟ್ಟದಲ್ಲಿ ಕನ್ನಡದಲ್ಲಿ ದೇವತೆಯಾಗಿ ಮಿಂಚಿದ್ದು ಸೌಂದರ್ಯ, ರಮ್ಯ ಕೃಷ್ಣ. ಅಮ್ಮೋರು, ದೇವಿ ಮೊದಲಾದ ಚಿತ್ರಗಳ ಬಿಡುಗಡೆ ನಂತರ ರಮ್ಯಕೃಷ್ಣ ಮತ್ತು ಸೌಂದರ್ಯ ಅವರನ್ನು ದೇವತೆಯಂತೆಯೇ ಪೂಜಿಸಿದ್ದರು ಭಕ್ತರು. ಪ್ರೇಕ್ಷಕರ ಪಾಲಿಗೆ ಆ ನಟಿಯರು ಕೇವಲ ನಟಿಯರಾಗಿಯಷ್ಟೇ ಉಳಿಯಲಿಲ್ಲ.
ಆ ಭಕ್ತಿಯನ್ನು ತಮ್ಮ ಜೀವನದುದ್ದಕ್ಕೂ ಅನುಭವಿಸಿದ್ದು ತೆಲುಗಿನ ಎನ್.ಟಿ.ಆರ್. ಪೌರಾಣಿಕ ಚಿತ್ರಗಳಲ್ಲೇ ಗಮನ ಸೆಳೆದಿದ್ದ ಎನ್.ಟಿ.ರಾಮರಾವ್ ಅವರನ್ನು ಜನ ಕಲಾವಿದ ಎನ್ನುವುದಕ್ಕಿಂತ ಹೆಚ್ಚಾಗಿ ದೇವರ ಅವತಾರವೆಂದೇ ನಂಬಿದ್ದರು. ಅವರು ಎಲ್ಲಿಯೇ ಹೋದರೂ ಜನ ಮೊದಲು ಪೂಜೆ ಮಾಡುತ್ತಿದ್ದರು. ಆ ಅನುಭವ ಅವರು ಚುವಾಣೆ ಪ್ರಚಾರಕ್ಕೆ ಹೋದಾಗಲೂ ನಡೆದಿತ್ತು.
ಇಂತಹುದೇ ಅನುಭವ ಹೊಂದಿದ್ದವರು ಅರುಣ್ ಗೋವಿಲ್ ಮತ್ತು ದೀಪಿಕಾ. ರಾಮಾಯಣದಲ್ಲಿ ಶ್ರೀರಾಮಚಂದ್ರನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರನ್ನು ಜನ ಶ್ರೀರಾಮನೆಂದೇ ಭಾವಿಸಿದ್ದರು. ಪೂಜಸಿದ್ದರು. ಸೀತೆಯಾಗಿ ನಟಿಸಿದ್ದ ದೀಪಿಕಾ ಕೂಡಾ ಭಕ್ತರ ಪಾಲಿಗೆ ಸಾಕ್ಷಾತ್ ಸೀತಾಮಾತೆಯೇ.
ಇದೀಗ ಅಂತಹ ದೈವೀಕ ಅನುಭವಕ್ಕೊಳಗಾಗುತ್ತಿರುವುದು ರಿಷಬ್ ಶೆಟ್ಟಿ. ಕಾಂತಾರ ಚಿತ್ರದ ಪಂಜುರ್ಲಿ ದೈವದ ಪಾತ್ರದ ನಂತರ ಅವರು ಹೋದಲ್ಲಿ ಬಂದಲ್ಲಿ ಕಾಲಿಗೆ ಬೀಳುತ್ತಿದ್ದಾರೆ. ರಿಷಬ್ ಶೆಟ್ಟಿ ಪಾಲಿಗೆ ಕಾಂತಾರ ದೈವ ಪ್ರೇರಣೆಯ ಸಿನಿಮಾ. ಧರ್ಮಸ್ಥಳಕ್ಕೆ ಹೋಗಿ ಹೆಗ್ಗಡೇರು ಮತ್ತು ಅಪ್ಪಣ್ಣ ಸ್ವಾಮಿಯ ಅಪ್ಪಣೆ ಪಡೆದ ನಂತರ ಪಂಜುರ್ಲಿ ದೈವವೂ ಹರಸಿ ಮೂಡಿದ್ದ ಸಿನಿಮಾ ಕಾಂತಾರ. ಪಂಜುರ್ಲಿ ದೈವ ಕೆನ್ನೆಗೆ ಹರಿಸಿನ ಹಚ್ಚಿತ್ತಂತೆ. ಅದೊಂದು ದೈವೀಕ ಅನುಭವ ಎನ್ನುತ್ತಾರೆ ರಿಷಬ್. ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ನಿಯಮ ಪಾಲಿಸಿ ಮಾಂಸಾಹಾರವನ್ನೂ ತ್ಯಜಿಸಿದ್ದರು ರಿಷಬ್ ಶೆಟ್ಟಿ. ಚಿತ್ರ ಓ.. ಎಂದು ಕೂಗುವುದನ್ನು ಅನುಕರಣೆ ಮಾಡಿ. ತರಲೆ ಮಾಡಬೇಡಿ. ಅಪಚಾರವಾದೀತು ಎಂದು ಎಚ್ಚರಿಕೆ ಕೊಟ್ಟಿದ್ದರು. ಇನ್ನು ಚಿತ್ರ ನೋಡಿದವರು ರಿಷಬ್ ಶೆಟ್ಟಿ ಕಂಡರೆ ಸಾಕು ಕೈ ಮುಗಿಯುತ್ತಿದ್ಧಾರೆ. ಕಾಲಿಗೆ ಬೀಳುತ್ತಿದ್ದಾರೆ. ನನಗೆ ಓಡಿ ಹೋಗಬೇಕು ಎನಿಸುತ್ತದೆ. ಮನುಷ್ಯರು ದೇವರಾಗಬಾರದು ಎನ್ನುತ್ತಾರೆ ರಿಷಬ್ ಶೆಟ್ಟಿ.