ಅಗಲಿದ ಹಿರಿಯರು ಕನಸಿನಲ್ಲಿ ಕಂಡರೆ ಭಯ ಬೀಳುವವರೇ ಹೆಚ್ಚು. ಆದರೆ ಕನಸಿನಲ್ಲಿ ಬರುವ ಪಿತೃಗಳು ತಮ್ಮ ಮಕ್ಕಳಿಗೆ, ಕಿರಿಯರಿಗೆ ಕೊಡುವುದು ಶುಭ ಸಂದೇಶವಂತೆ. ಅಷ್ಟೇ ಅಲ್ಲ, ಇರುವೆ, ಹಸು, ಕಾಗೆ, ಹೂವುಗಳಲ್ಲಿಯೂ ಪಿತೃಗಳು ಶುಭ ಸಂದೇಶ ರವಾನಿಸುತ್ತಾರೆ. 2024 ರ ಪಿತೃ ಪಕ್ಷವು ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಿ ಅಕ್ಟೋಬರ್ 2ರವರೆಗೆ ಇರುತ್ತದೆ. ಪಿತೃಪಕ್ಷದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧ. ಪಿತೃಪಕ್ಷದ ಸಮಯದಲ್ಲಿ ಪೂರ್ವಜರು ಮತ್ತೊಮ್ಮೆ ಭೂಮಿಗೆ ಬರುತ್ತಾರೆ ಎನ್ನುವುದು ನಂಬಿಕೆ. ಈ ಕಾರಣಕ್ಕಾಗಿ, ಪಿತೃ ಪಕ್ಷದ ಅವಧಿಯಲ್ಲಿ, ಪೂರ್ವಜರ ಶಾಂತಿ ಮತ್ತು ಮೋಕ್ಷಕ್ಕಾಗಿ ಶ್ರಾದ್ಧ ಅಥವಾ ತರ್ಪಣ ಕಾರ್ಯವನ್ನು ಮಾಡಲಾಗುತ್ತದೆ. ಅನೇಕ ಧಾರ್ಮಿಕ ನಂಬಿಕೆಗಳು ಪಿತೃ ಪಕ್ಷದೊಂದಿಗೆ ಸಂಬಂಧ ಹೊಂದಿವೆ. ಈ ನಂಬಿಕೆಗಳ ಪ್ರಕಾರ, ಪಿತೃಗಳು ನಿಮ್ಮ ಮೇಲೆ ಸಂತುಷ್ಟರಾಗಿದ್ದರೆ ಹಾಗೂ ನಿಮ್ಮ ಅಭಿವೃದ್ಧಿ ಬಯಸುತ್ತಿದ್ದಾರೆ ಎನ್ನುವ ನಂಬಿಕೆಯೂ ಇದೆ.
ಪಿತೃಗಳು ಕನಸಿನಲ್ಲಿ ಕಂಡರೆ..
ಪಿತೃಗಳು ಅಥವಾ ಸತ್ತಿರುವ ನೀವು ಇಷ್ಟಪಡುವ, ಹಿತೈಷಿ ಸಂಬಂಧಿಕರು ಕನಸಿನಲ್ಲಿ ಕಾಣಿಸಿಕೊಂಡರೆ ಖುಷಿ ಪಡಿ. ಅದರಲ್ಲಿಯೂ ಕನಸಿನಲ್ಲಿ ಕಂಡಾಗ ಸಂತುಷ್ಟರಾಗಿರುವಂತೆ ಕಾಣಿಸಿಕೊಂಡರೆ ಅದು ನಿಮ್ಮ ಪೂರ್ವಜರು ನಿಮ್ಮೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವುದರ ಸಂಕೇತ. ನಿಮ್ಮ ಕನಸಿನಲ್ಲಿ ನಿಮ್ಮ ಪೂರ್ವಜರು ಸಂತೋಷವಾಗಿರುವುದನ್ನು ನೋಡುವುದು ನಿಮ್ಮ ಪ್ರಗತಿಯ ಸೂಚಕ. ನೆಮ್ಮದಿಯಾಗಿ ಈ ಸಂದರ್ಭದಲ್ಲಿ ಪೂರ್ವಜರ ಆತ್ಮ ತೃಪ್ತಿಗಾಗಿ ವಿಶೇಷ ಪೂಜೆ-ಹವನ ಮಾಡಿಸಿ.
ಕಪ್ಪು ಇರುವೆಗಳು ಕಂಡರೆ..
ಮನೆಗೆ ಕಪ್ಪು ಇರುವೆ ಬರುತ್ತಿದ್ದರೆ, ತುಂಬಾ ಚಿಂತಿಸಲು ಹೋಗಬೇಡಿ. ಅದರಲ್ಲೂ ಯಾವುದೇ ತೂತುಗಳಿಲ್ಲದ ಕಡೆ ಕಪ್ಪು ಇರುವೆಗಳಿದ್ದರೆ ಅತಿಯಾಗಿ ಚಿಂತಿಸಲು ಹೋಗಬೇಡಿ. ಬದಲಾಗಿ, ಇರುವೆಗಳು ಹೊರಬರುವ ಸ್ಥಳದಲ್ಲಿ ಹಿಟ್ಟನ್ನು ಅವುಗಳಿಗೆ ತಿನ್ನಲು ಅಕ್ಕಿ, ರವೆ, ಸಕ್ಕರೆ, ಬೆಲ್ಲದಂತಹ ಆಹಾರಗಳನ್ನು ಇಡಿ. ಇದನ್ನು ಮಾಡುವುದರಿಂದ ಇರುವೆಗಳು ಸ್ವಲ್ಪ ಸಮಯದಲ್ಲೇ ಅಲ್ಲಿಂದ ಹೊರಟು ಹೋಗುತ್ತದೆ. ಪಿತೃಪಕ್ಷದ ಸಮಯದಲ್ಲಿ ಇರುವೆಗಳು ಮನೆಯನ್ನು ಪ್ರವೇಶಿಸಿದರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಪಿತೃಪಕ್ಷದಲ್ಲಿ ಒಣಗಿದ್ದ ಗಿಡ, ಹೂಬಳ್ಳಿ ಚಿಗುರುತ್ತಿದ್ದರೆ..
ನಾವೆಷ್ಟೇ ಕಾಳಜಿ, ಆರೈಕೆ ಮಾಡಿದರೂ.. ಮನೆಯಲ್ಲಿ ನೆಟ್ಟಿರುವ ಮರಗಳು ಮತ್ತು ಗಿಡಗಳು ಒಣಗಿ ಹೋಗುತ್ತಿರುತ್ತವೆ. ರಣ ರಣ ಬಿಸಿಲು, ಯಾವುದೋ ಹುಳ ತಾಕುವುದು, ನೆರಳು.. ಹೀಗೆ ಹಲವು ಕಾರಣಗಳಿರುತ್ತವೆ. ಅಂತಹ ಒಣಗಿದ ಅಥವಾ ಸತ್ತ ಗಿಡ ಮತ್ತು ಮರಗಳು ಮತ್ತೆ ಅರಳಲು ಪ್ರಾರಂಭಿಸಿದರೆ ಅಥವಾ ಅವುಗಳು ಮತ್ತೆ ಹಸಿರಾಗಲು ಕಾಣಲು ಪ್ರಾರಂಭಿಸಿದರೆ ಅದನ್ನು ಪಿತೃಗಳು ನಿಮ್ಮ ಮೇಲೆ ಸಂತುಷ್ಟರಾಗಿದ್ದಾರೆ ಎಂಬುದರ ಸೂಚನೆಯಾಗಿದೆ. ಅದೂ ಪಿತೃಪಕ್ಷದಲ್ಲಿ ಹೀಗಾದರೆ.. ಖುಷಿ ಪಡಿ. ಪೂರ್ವಜರ ವಿಶೇಷ ಆಶೀರ್ವಾದವು ನಿಮ್ಮ ಮೇಲಿದೆ ಎಂದು ಅರ್ಥ ಮಾಡಿಕೊಳ್ಳಿ.
ಹಸುಗಳೇ ಬಂದು ಆಹಾರ ತಿಂದರೆ..
ನಾಯಿ, ಮೇಕೆ, ಎಮ್ಮೆ ಮುಂತಾದ ಯಾವುದೇ ಪ್ರಾಣಿಗಳು ಬಂದು ನೀವು ಇಟ್ಟಿರುವ ಆಹಾರವನ್ನು ಪ್ರೀತಿಯಿಂದ ಸ್ವೀಕರಿಸಿ ಅಲ್ಲಿಂದ ಹೊರಟು ಹೋದರೆ, ಅದು ನಿಮ್ಮ ಪೂರ್ವಜರ ಆಶೀರ್ವಾದವು ನಿಮ್ಮ ಮೇಲಿದೆ ಭಾವಿಸಬೇಕು. ಅದರಲ್ಲೂ ಹಸುಗಳು ಬಂದು, ಆಹಾರ ತಿಂದು, ಅಲ್ಲಿಯೇ ನಿಂತಿರುವ ನಿಮ್ಮ ಮೈಗೆ ನಾಲಗೆಯಿಂದ ನೆಕ್ಕಿ, ಆಶೀರ್ವದಿಸಿ ಹೋದರೆ.. ನೀವು ಪ್ರಗತಿ ಹೊಂದುವ ಶುಭ ಸಂಕೇತವಾಗಿದೆ. ಜೀವನದ ಮುಂದಿನ ದಿನಗಳಲ್ಲಿ ನೀವು ಎಲ್ಲಾ ಕಾರ್ಯಗಳಲ್ಲೂ ಯಶಸ್ಸನ್ನು ಕಂಡುಕೊಳ್ಳುತ್ತೀರಿ.
ಕಾಗೆಗಳು ಕಾಕಾ.. ಎಂದರೆ..
ಪಿತೃಪಕ್ಷದ ಸಮಯದಲ್ಲಿ ನಿಮ್ಮ ಮನೆಯ ಅಂಗಳ, ಟೆರೇಸ್, ಕಿಟಕಿ ಇತ್ಯಾದಿಗಳಲ್ಲಿ ಕಾಗೆ ಬಂದು ಕೂಗಿದರೆ, ಅದು ಪೂರ್ವಜರು ಸಂತೋಷವಾಗಿರುವುದರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಾಗೆಯನ್ನು ಯಮರಾಜನ ಸಂದೇಶವಾಹಕ ಎಂದೂ ಕರೆಯುತ್ತಾರೆ.
ನಿರ್ಗತಿಕರು ನಿಮ್ಮ ಬಳಿಗೇ ಬಂದು ದಾನ ಕೇಳಿದರೆ..
ಪಿತೃ ಪಕ್ಷದ ಸಮಯದಲ್ಲಿ ಹಸಿದಿರುವವರು ಅಥವಾ ನಿರ್ಗತಿಕರು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಹಾಋ ನೀಡುವಂತೆ ಕೇಳಿಕೊಂಡರೆ ಅಥವಾ ಅನ್ನದಾನವನ್ನು ಕೇಳಿದರೆ ಅದು ನಿಮ್ಮ ಪೂರ್ವಜರು ಎಂಬುದಕ್ಕೆ ಮಂಗಳಕರ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರಿಗೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು. ಅವರಿಗೆ ತಿನ್ನಲು ಏನನ್ನಾದರೂ ನೀಡಬೇಕು. ದಾನ ಕೊಡುವ ಶಕ್ತಿ ಇಲ್ಲದಿದ್ದರೆ, ವಿನಯದಿಂದ ಹೇಳಿ ಕಳಿಸಿ. ಅಪ್ಪಿ ತಪ್ಪಿಯೂ ಅಹಂಕಾರ, ದರ್ಪದ ಪ್ರದರ್ಶನ ಬೇಡ.