ಕಳೆದ ಒಲಿಂಪಿಕ್ಸ್ʻನಲ್ಲಿ ಅದೃಷ್ಟ ಆಕೆಗೆ ಕೈಕೊಟ್ಟಿತ್ತು. 2021ರಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ʻನಲ್ಲಿ ಅದೃಷ್ಟ ಕೈಕೊಟ್ಟಿತ್ತು. ಏಕೆಂದರೆ ಇನ್ನೇನು ಶೂಟಿಂಗ್ ಶುರು ಮಾಡಬೇಕು.. ಎನ್ನುವಾಗ ರೈಫಲ್ ಜಾಮ್ ಆಗಿತ್ತು. 2018ರಲ್ಲಿ ಕಾಮನ್ʻವೆಲ್ತ್ ಚಿನ್ನ ಗೆದ್ದಿದ್ದ ಮನು ಭಾಕರ್ʻಗೆ ಅದು ಅನಿರೀಕ್ಷಿತ ಆಘಾತ. ಇನ್ನೇನು ಫೈನಲ್ ಎಂಟ್ರಿ ಫಿಕ್ಸ್ ಆಯ್ತು ಎನ್ನುವಾಗ ಕೈಕೊಟ್ಟಿದ್ದ ರೈಫಲ್ ಮನು ಭಾಕರ್ ಕನಸಸನ್ನಷ್ಟೇ ಅಲ್ಲ, ಆತ್ಮವಿಶ್ವಾಸವನ್ನೂ ಕೊಂದು ಹಾಕಿತ್ತು.
ಆಗಿನ್ನೂ ಮನು ಭಾಕರ್ʻಗೆ ಕೇವಲ 15 ವರ್ಷ. ಒಲಿಂಪಿಕ್ಸ್ʻನಲ್ಲಿ ಸೋತು ಮನೆಗೆ ಬಂದವರು ಮನೆ ಬಿಟ್ಟು ಹೊರಗೆ ಬರಲೇ ಇಲ್ಲ. ಬರೋಬ್ಬರಿ 25 ದಿನ ಮನೆಯೊಳಗೇ ಕುಳಿತುಬಿಟ್ಟರು. ಅಂತಹ ಮನು ಭಾಕರ್ ಶೂಟಿಂಗ್ʻನ್ನೇ ಬಿಟ್ಟುಬಿಟ್ಟರು. ಸುಮಾರು ಒಂದು ವರ್ಷ ತನಗೆ ತಾನೇ ದಿಗ್ಬಂಧನ ವಹಿಸಿಕೊಂಡು, ಬೇರೆಯದ್ದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳೋ ಯೋಚನೆಯಲ್ಲಿದ್ದ ಮನು ಭಾಕರ್ʻಳನ್ನು ಮತ್ತೆ ಶೂಟಿಂಗ್ ಅಖಕಾಡಕ್ಕೆ ಧುಮುಕುವಂತೆ ಮಾಡಿದ್ದು ಆಕೆಯ ತಾಯಿ.
ಮಗಳನ್ನು ಸ್ವಲ್ಪ ಸ್ವಲ್ಪವಾಗಿ ಬದಲಿಸುತ್ತಲೇ ಆಕೆಯ ಕೈಗೆ ಭಗವದ್ಗೀತೆ ಕೊಟ್ಟರು. ಭಗವದ್ಗೀತೆಯಲ್ಲಿದ್ದ ಆ ಶ್ಲೋಕ..
ಕರ್ಮಣ್ಯೇವಾಧಿಕಾರಸ್ತೇಮಾಫಲೇಶು ಕದಾಚನ..
ಅಂದರೆ ಕರ್ಮಫಲ ಸಿದ್ಧಾಂತ. ಪ್ರಯತ್ನ ನಿನ್ನದು, ಫಲಾಫಲ ದೇವರದ್ದು ಎಂಬ ಮಾತು ಮನು ಭಾಕರ್ ಅವರಿಗೆ ಪರಿಣಾಮ ಬೀರಿತಂತೆ. ಗೆದ್ದ ಮೇಲೆ ಈ ಬಗ್ಗೆ ಮಾತನಾಡಿರುವ ಮನು ಭಾಕರ್ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.
ಫೈನಲ್ನಲ್ಲಿ ಹೆಚ್ಚು ಸಹಾಯವಾಗಿದ್ದು ಭಗವದ್ಗೀತೆ. ಗೀತೆಯನ್ನು ನಾನು ತುಂಬಾ ಓದಿದ್ದೇನೆ. ಕರ್ಮದ ಮೇಲೆ ಕೇಂದ್ರೀಕರಿಸಬೇಕು, ಫಲಿತಾಂಶದ ಮೇಲಲ್ಲ ಎಂದು ಅರ್ಜುನನಿಗೆ ಕೃಷ್ಣ ಹೇಳುವ ಮಾತುಗಳು ಫೈನಲ್ನಲ್ಲಿ ನನ್ನ ತಲೆಯಲ್ಲಿ ಓಡುತ್ತಿದ್ದವು. ಅದೆಲ್ಲವೂ ಪರಿಣಾಮ ಬೀರಿತು. ಏಕಾಗ್ರತೆ ಮೂಡುವಂತೆ ಮಾಡಿತು ಎಂದಿದ್ದಾರೆ.
ಈ ಬಾರಿ ಮನು ಭಾಕರ್ ಒಂದಲ್ಲ ಎರಡು ದಾಖಲೆ ಬರೆದಿದ್ದಾರೆ. ಏಕೈಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವೈಯಕ್ತಿಕವಾಗಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲಿಟ್ ಎಂಬ ದಾಖಲೆಯನ್ನು ಮನು ಭಾಕರ್ ಬರೆದಿದ್ದಾರೆ. ಮನು ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಶೂಟಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಭಾರತದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿ ಕಂಚಿನದ ಪದಕ ಗೆದ್ದು, ಎರಡು ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಭಾರತದ ಪರ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಈ ಹಿಂದೆ ಕೆಡಿ ಜಾಧವ್, ಮೇಜರ್ ಧ್ಯಾನ್ ಚಾಂದ್, ಕರ್ಣಮ್ ಮಲ್ಲೇಶ್ವರಿ, ಅಭಿನವ್ ಬಿಂದ್ರಾ, ನೀರಜ್ ಚೋಪ್ರಾ ವೈಯಕ್ತಿಕವಾಗಿ ಚಿನ್ನದ ಪದಕಗಳ ಸಾಧನೆಯನ್ನು ಮಾಡಿದ್ದಾರೆ. ಇನ್ನು ಸೈನಾ ನೆಹ್ವಾಲ್, ಪಿವಿ ಸಿಂಧೂ, ಸುಶೀಲ್ ಕುಮಾರ್ ಸೇರಿ ಹಲವರು ಕೂಡ ಈ ಕ್ರೀಡಾಕೂಟದಲ್ಲಿ ಪದಕದ ಸಾಧನೆ ಮಾಡಿದ್ದಾರೆ. ಆದರೆ, ಪಿವಿ ಸಿಂಧೂ ಮತ್ತು ಸುಶೀಲ್ ಕುಮಾರ್ ಬಿಟ್ಟರೆ, ಭಾರತದ ಕ್ರೀಡಾಪಟುಗಳು ಇಲ್ಲಿಯವರೆಗೂ ಎರಡು ಪದಕ ಗೆದ್ದೇ ಇಲ್ಲ. ಏಕೈಕ ಆವೃತ್ತಿಯಲ್ಲಿ ಎರಡು ವೈಯಕ್ತಿಕ ಪದಕ ಗೆದ್ದಿರುವುದು ಹೊಸ ಇತಿಹಾಸ. ಆದರೆ, ಶೂಟಿಂಗ್ ವಿಭಾಗದಲ್ಲಿ ಮನು ಭಾಕರ್ ಎರಡು ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಇದೀಗ ಅವರು ಹ್ಯಾಟ್ರಿಕ್ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಇವರು 25 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದಾರೆ.