ಮುನಿರತ್ನಂ ನಾಯ್ಡು ವಿರುದ್ಧ ಕರ್ನಾಟಕದ ಹಲವು ಕಡೆ ಈಗಾಗಲೇ ಕೇಸ್ಗಳನ್ನ ದಾಖಲು ಮಾಡಲು ಸಿದ್ಧತೆ ಸಾಗಿದೆ. ಅದರಲ್ಲೂ ಬಿಜೆಪಿ ನಾಯಕರಿಗೆ ಈ ವಿಚಾರ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮುನಿರತ್ನಂ ನಾಯ್ಡುಗೆ ತಮ್ಮದೇ ಆಡಿಯೋ ಮುಳುವಾಗಿ ಪರಿಣಮಿಸಿದ್ದು, ಪೊಲೀಸ್ ಪಡೆ ಕೇಳುತ್ತಿರುವ ಪ್ರಶ್ನೆಗೆ ನಲುಗಿ ಹೋಗಿದ್ದಾರೆ ಮುನಿರತ್ನಂ ನಾಯ್ಡು. ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಒಕ್ಕಲಿಗರು & ದಲಿತರು ಹಾಗೂ ಕನ್ನಡ ನಾಡಿನ ಮಹಿಳೆಯರ ಕುರಿತಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ, ಮುನಿರತ್ನಂ ನಾಯ್ಡುಗೆ ಪಾಠ ಕಲಿಸಲು ದೊಡ್ಡ ಮಟ್ಟದ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮುನಿರತ್ನಂ ನಾಯ್ಡುಗೆ ಈಗ ಒಕ್ಕಲಿಗರ ಮಠದ ಸ್ವಾಮೀಜಿಗಳೂ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಶ್ರೀ ಆದಿಚುಂಚನಗಿರಿ ಮಠದ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಶ್ರೀಗಳು ಕೂಡ, ಮುನಿರತ್ನಂ ನಾಯ್ಡು ವಿರುದ್ಧದ ಆರೋಪದ ಬಗ್ಗೆ ಹೇಳಿಕೆ ನೀಡಿದ್ದಾರೆ. ಆಧುನಿಕತೆ ಬೆಳೆದಿದೆ ಅಂತ ಯಾವ ಕಾರಣಕ್ಕು ನಮ್ಮ ಸಂಸ್ಕೃತಿ ಮರೆಯಬಾರದು. ಪ್ರತಿಯೊಂದು ಜನಾಂಗವನ್ನ ನಮ್ಮ ಸಂವಿಧಾನ ಒಪ್ಪಿಕೊಂಡಿದೆ, ಹಿಂದೆ ಉರಿಗೌಡ, ನಂಜೇಗೌಡ ವಿಚಾರಕ್ಕೆ ಕರೆದು ಮುನಿರತ್ನಗೆ ಬುದ್ದಿ ಮಾತು ಹೇಳಿದ್ದೆ. ಆಗ ಅವರು ನಿಲ್ಲಿಸಿದ್ದರು. ಈಗ ಈ ವಿಚಾರದಲ್ಲಿ ಧ್ವನಿ ಪರೀಕ್ಷೆ ನಿಜ ಆಯ್ತು ಅಂದರೆ, ಈ ರೀತಿ ಮಾತನ್ನು ಆಡಿದವರನ್ನ ಕ್ಷಮಿಸಲು ಸಾಧ್ಯ ಇಲ್ಲ ಎಂದಿದ್ದಾರೆ. ಅಲ್ಲದೆ ತಾಯಂದಿರನ್ನ ಗೌರವಿಸುವ ಈ ನಮ್ಮ ದೇಶದಲ್ಲಿ ಪೂಜ್ಯನೀಯ ಸ್ಥಾನ ಇದೆ. ಈ ಆಡಿಯೋದಲ್ಲಿ ಮಾತನಾಡಿದವರು ಯಾರೇ ಆದರೂ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಮ್ಮ ದೇಶದ ಆಸ್ಮಿತೆ ಅಂದ್ರೆ ನಮ್ಮ ತಾಯಂದಿರು. ಅದಕ್ಕಾಗೇ ನಮ್ಮ ದೇಶವನ್ನ ಭಾರತ ಮಾತೆ ಅಂತ ಕರೆಯುತ್ತೇವೆ. ಅಂತಹ ತಾಯಂದಿರ ಬಗ್ಗೆ ಹೇಳಲು ಆಗದೇ ಇರುವಂತಹ ಪದಗಳು ಆ ಧ್ವನಿಯಲ್ಲಿದೆ. ಇದು ಸರಿಯಲ್ಲ ಅಂತ ಭಾವನೆಯಿದೆ. ಅದನ್ನು ಮಾತನಾಡಿರೋದು ಯಾರೇ ಆದ್ರು ಅವರ ಮೇಲೆ ಕ್ರಮ ಆಗಲಿ ಎಂದು ಅಗ್ರಹಿಸಿದ್ದಾರೆ.
ನಾಗಮಂಗಲ ಕೋಮುಗಲಭೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸ್ವಾಮೀಜಿ, ನಾಗಮಂಗಲ ಸದ್ಯ ಶಾಂತಿಯಿಂದ ಕೂಡಿದೆ. ಯಾವಾಗಲೂ ಶಾಂತಿಯಿಂದಲೇ ಕೂಡಿರುತ್ತಿತ್ತು.ಇದ್ದಕ್ಕಿದ್ದಂತೆ ಘಟನೆ ಆಗಿರೋದು ನೋವಿನ ಸಂಗತಿ. ಸಾಮಾನ್ಯವಾಗಿ ಹಿಂದೂ ಮುಸ್ಲಿಮರು ಆ ಭಾಗದಲ್ಲಿ ಸೌಹಾರ್ದವಾಗಿ ಬದುಕುತ್ತಿದ್ರು. ಸದ್ಯ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು. ಧರ್ಮ ಬೇರೆಯಾದ್ರೂ ಮನುಷ್ಯತ್ವ ಒಂದೇ ಸಾಮರಸ್ಯದಿಂದ ಪ್ರೀತಿಯಿಂದ ಬದುಕೋಣ ಎಂದು ಕಿವಿ ಮಾತು ಹೇಳಿದ್ದಾರೆ. ಕೆಂಗೇರಿಯಲ್ಲಿ ಶಾಸಕ ಮುನಿರತ್ನ ವಿರುದ್ಧ ನಡೆಯಲಿರುವ ಒಕ್ಕಲಿಗರ ಸಂಘ ಪ್ರತಿಭಟನೆ ಕುರಿತು ಮಾಹಿತಿ ಇಲ್ಲ ಎಂದಿದ್ದಾರೆ.
ಮುನಿರತ್ನ ಅವರ ಆದಿಚುಂಚನಗಿರಿ ಪೀಠದ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ್ದು ಉರಿಗೌಡ ಮತ್ತು ನಂಜೇಗೌಡ ಎಂಬ ಸುದ್ದಿಯಾದಾಗ, ಅದನ್ನು ಸಿನಿಮಾ ಮಾಡುತ್ತೇನೆ ಎಂದು ಪಬ್ಲಿಸಿಟಿಗೆ ಬಂದಿದ್ದರು ಮುನಿರತ್ನ. ಆಗ ಸಿನಿಮಾವನ್ನು ನಿಲ್ಲಿಸುವಂತೆ ನಿರ್ಮಲಾನಂದ ಸ್ವಾಮೀಜಿ ಸೂಚನೆ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ವಿವಾದ ಮಾಡಿಕೊಂಡು, ಜೈಲೂ ಸೇರಿರುವ ಮುನಿರತ್ನ, ಮತ್ತೊಮ್ಮೆ ಸ್ವಾಮೀಜಿಗಳ ಕೆಂಗಣ್ಣಿಗೆ ಗುರಿಯಾಗಿದ್ಧಾರೆ.