ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದೆ. ಮೂರೂವರೆ ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಧ್ರುವ ಸರ್ಜಾ ಅವರ ಚಿತ್ರವಿದು. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಧ್ರುವ ಸರ್ಜಾ, ಅವಧೂತ ಅರ್ಜುನ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಮೈಸೂರಿನ ಅರ್ಜುನ ಅವಧೂತ ಗುರೂಜಿ ಅವರನ್ನು ಭೇಟಿಯಾಗಿದ್ದ ಧ್ರುವ ಸರ್ಜಾ ಗುರೂಜಿಯ ಆಶೀರ್ವಾದ ಪಡೆದಿದ್ದಾರೆ. ಧ್ರುವ ಅವರಿಗೆ ಗುರೂಜಿ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಧ್ರುವ ಸರ್ಜಾ ಅವರಿಗೆ ಈಗ ಅತ್ಯಗತ್ಯವಾಗಿ ದೊಡ್ಡ ಗೆಲುವಿನ ಅಗತ್ಯ ಇದೆ. ‘ಮಾರ್ಟಿನ್’ ಟೈಟಲ್ ಹಾಗು ಟ್ರೇಲರ್ನಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿರೋ ಬಹುನಿರೀಕ್ಷಿತ ಚಿತ್ರ. ಈ ಹಿಂದಿನ ಚಿತ್ರ ಪೊಗರು, ಇದಕ್ಕಿಂತಲೂ ದೊಡ್ಡ ಕ್ರೇಜ್ ಹುಟ್ಟು ಹಾಕಿತ್ತು. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ಪ್ರೇಕ್ಷಕರು ನಿರಾಸೆಗೊಂಡಿದ್ದರು. ಇದೀಗ ಆ್ಯಕ್ಷನ್ ಪ್ರಿನ್ಸ್ ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಂಡಿರುವ ಮಾರ್ಟಿನ್, ದೇಶಾದ್ಯಂತ ಅಕ್ಟೋಬರ್ 11ಕ್ಕೆ ಬಿಡುಗಡೆ ಆಗಲಿದೆ. ಈ ಹಿನ್ನೆಲೆ ನಾಯಕ ನಟ ಚಿತ್ರದ ಯಶಸ್ಸಿಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಈ ಮಧ್ಯೆ ಧ್ರುವ ಸರ್ಜಾ ಮೈಸೂರಿನಲ್ಲಿ ಅರ್ಜುನ ಅವಧೂತರನ್ನು ಭೇಟಿ ಮಾಡಿದ್ದಾರೆ.
ಧ್ರುವ ಸರ್ಜಾ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದು, ಅನ್ವೇಶಿ ಜೈನ್, ನಿಕಿತನ್ ಧೀರ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಬೆಂಗಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಾಶ್ಮೀರದ ಐಸ್ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್ಗಳು ಚಿತ್ರದಲ್ಲಿರಲಿದೆ. ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮಾ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಧ್ರುವ ಸರ್ಜಾ ಅವರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿದ, ಸ್ಟಾರ್ ಹೀರೋ ಮಾಡಿದ ಎಪಿ ಅರ್ಜುನ್, ಈ ಚಿತ್ರಕ್ಕೆ ಮತ್ತೊಮ್ಮೆ ಆಕ್ಷನ್ ಕಟ್ ಹೇಳಿರುವುದು ವಿಶೇಷ. ಅಂದಹಾಗೆ ಅರ್ಜುನ ಅವಧೂತರ ಬಗ್ಗೆ ಧ್ರುವ ಸರ್ಜಾ ಅವರಿಗೆ ತಿಳಿಸಿದ್ದು, ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊ ಎಂದು ಸಲಹೆ ನೀಡಿದ್ದು ರಾಜಕಾರಣಿಯೂ ಆಗಿರುವ ಖ್ಯಾತ ನಟಿ ಎಂದು ಹೇಳಲಾಗಿದೆ.
ಯಾರಿದು ಅವಧೂತ ಅರ್ಜುನ ಗುರೂಜಿ..?
ಆಧ್ಮಾತ್ಮಿಕ ಜಗತ್ತಿನಲ್ಲಿ ಅವಧೂತ ಎಂಬ ಪದಕ್ಕೆ ದೊಡ್ಡ ಗೌರವ, ಮಾನ್ಯತೆ ಇದೆ. ಶ್ರೀಪಾದ ಶ್ರೀವಲ್ಲಭ, ನೃಸಿಂಹಸರಸ್ವತಿ, ಸ್ವಾಮಿ ಸಮರ್ಥರು, ಸಾಯಿಬಾಬಾ ಅವರಂತಹವರು ಸ್ಥಾನ ಪಡೆದಿದ್ದಾರೆ. ಈ ಅರ್ಜುನ ಅವಧೂತ ಎಂಬುವವರು ಮೈಸೂರಿನವರು. ಅರ್ಜುನ ಅವಧೂತ ಮಹಾರಾಜ ಗುರುಗಳಿಗೆ ಸಾಯಿಬಾಬ ಶ್ರೀಧರಸ್ವಾಮಿಗಳ ಹಾಗೂ ಸಖರಾಯಪಟ್ಟಣದ ಶ್ರೀ ವೇಂಕಟಾಚಲ ಅವಧೂತರ ಆತ್ಮಾನುಗ್ರಹವಾಗಿದೆ ಎನ್ನುವುದು ನಂಬಿಕೆ. ಅವಧೂತ ಅರ್ಜುನ ಅವರ ವಯಸ್ಸು 30 ದಾಟಿದೆ, ಅಷ್ಟೇ. ಮೈಸೂರಿನ ಗೀತಾನಿಕೇತನದಲ್ಲಿ ವಾಸವಿದ್ದಾರೆ.ಅರ್ಜುನ್ ಅವಧೂತ್ತರ ನಿವಾಸ ಗೀತಾನಿಕೇತನಕ್ಕೆ ಎಲ್ಲ ಪಕ್ಷದ ರಾಜಕಾರಣಿಗಳು, ಉದ್ಯಮಿಗಳು, ಚಲನಚಿತ್ರ ನಟರು, ಜನಸಾಮಾನ್ಯರು ಹೋಗುತ್ತಾರೆ.
ನಟಿ, ರಾಜಕಾಣಿ ತಾರಾ ಅವರಿಗೆ ಅವಧೂತ ಅರ್ಜುನ ಗುರೂಜಿಯವರ ಪವಾಡದ ದರ್ಶನ :
ಇನ್ನು ಇವರ ಪವಾಡಗಳ ಬಗ್ಗೆ ನಟಿ ತಾರಾ ಅನುರಾಧಾ ಅವರು ಹೇಳಿಕೊಂಡಿದ್ದರು. ಅವರ ಬಳಿ ಇವರ ಕುರಿತಾದ ಹಲವು ಕಥೆಗಳಿವೆ.
ನನಗೆ ರಾಜಕೀಯ ಆಸಕ್ತಿ ಇದ್ದ ಕ್ಷೇತ್ರವಾಗಿರಲಿಲ್ಲ. ರಾಜಕೀಯಕ್ಕೆ ಬರುವ ಬಗ್ಗೆ ಆಲೋಚನೆ ಕೂಡಾ ಮಾಡದ ನನ್ನನ್ನು, ನೀವು ರಾಜಕೀಯಕ್ಕೆ ಬರುತ್ತೀರಿ ಎಂದು ಹರಸಿದ್ದರು. ಆಗ ಪ್ರಶ್ನೆ ಮಾಡಿದ್ದೆ. ಆದರೆ ಅವರು ನಕ್ಕು ಆಗುತ್ತೆ ಹೋಗು ಎಂದಿದ್ದರು. ಮುಂದೆ ನಾನು ರಾಜಕೀಯಕ್ಕೆ ಬಂದು ಶಾಸಕಿಯಾದೆ.
ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಕೊಡು ಎಂದು ಪ್ರತಿಮೆಯನ್ನು ಕೊಟ್ಟಿದ್ದರು. ಮೋದಿಯವರನ್ನು ಭೇಟಿ ಮಾಡುವುದೇ ಕಷ್ಟ. ಇನ್ನು ಉಡುಗೊರೆ ಕೊಡುವುದು ಹೇಗೆ ಎಂದಿದ್ದೆ. ನೀವು ತೆಗೆದುಕೊಂಡು ಹೋಗಿ, ಅವರೇ ಬಂದು ತಗೋತಾರೆ ಎಂದಿದ್ದರು. ರೇಣುಕಾಜೊಲ್ಲೆಯವರ ಕಾರ್ಯಕ್ರಮದಲ್ಲಿ ಮೋದಿಯವರು ಇದ್ದರು. ಅವರೇ ಬಂದು ಪ್ರತಿಮೆ ಸ್ವೀಕರಿಸಿದರು.
ಇನ್ನು ನೀರು ಹಾಕಿ ದೀಪ ಬೆಳಗಿಸಿರುವುದನ್ನೂ ನೋಡಿದ್ದೇನೆ ಎನ್ನುತ್ತಾರೆ ತಾರಾ ಅನುರಾಧ.
ಅಷ್ಟೇ ಅಲ್ಲ, ಈ ಹಿಂದೆ ಯಡಿಯೂರಪ್ಪ ಸಿಎಂ ಆಗ್ತಾರೆ. ಕೆಲವು ವರ್ಷ ಸಿಎಂ ಆಗಿರುತ್ತಾರೆ ಎಂದು ಭವಿಷ್ಯ ನುಡಿದಿದ್ದವರು ಇದೇ ಅರ್ಜುನ ಅವಧೂತರು.