ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳ ಪಟ್ಟಿಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ.
ಡಾ.ರಾಜ್ ಕುಮಾರ್ ಅವರ ಜೀವನ ಚೈತ್ರ ನೋಡಿ, ಮದ್ಯಪಾನ ವಿರುದ್ಧ ಹೋರಾಟ ನಡೆಸಿದ ಮಹಿಳೆಯರು..
ಹಾಲು ಜೇನು ಸಿನಿಮಾ ನೋಡಿ ಡಿವೋರ್ಸ್ ಅರ್ಜಿಯನ್ನು ವಾಪಸ್ ಪಡೆದ ದಂಪತಿಗಳು..
ಒಡಹುಟ್ಟಿದವರು, ಯಜಮಾನ ಚಿತ್ರ ನೋಡಿ, ಅಣ್ಣ-ತಮ್ಮಂದಿರಂತೆ ಮತ್ತೆ ಒಂದಾದ ದಾಯಾದಿಗಳು..
ಬೂತಯ್ಯಯನ ಮಗ ಅಯ್ಯು ಚಿತ್ರ ನೋಡಿ, ಕೋರ್ಟಿನಲ್ಲಿ ಹಾಕಿದ್ದ ಚಿಲ್ಲರೆ ಕೇಸುಗಳನ್ನು ವಾಪಸ್ ಪಡೆದು ಬದುಕು ಕಟ್ಟಿಕೊಂಡವರು..
ರಾಜಕುಮಾರ ಚಿತ್ರ ನೋಡಿ ವೃದ್ಧಾಶ್ರಮದಲ್ಲಿ ಬಿಟ್ಟಿದ್ದ ಹೆತ್ತವರನ್ನು ಮನೆಗೆ ಕರೆದುಕೊಂಡು ಹೋದ ಮಕ್ಕಳು..
ಬಂಗಾರದ ಮನುಷ್ಯ ಚಿತ್ರ ನೋಡಿ ರೈತರಾಗಲು ಹೋಗಿ ಯಶಸ್ವಿಯಾದ ಯುವಕರು..
ಇಂತಹ ಹಲವಾರು ಚಿತ್ರಗಳಿವೆ. ಇಂತಹ ಲಿಸ್ಟಿಗೆ ಭೀಮ ಕೂಡಾ ಸೇರಿದೆ.
ಹೌದು.. ದುನಿಯಾ ವಿಜಯ್ ಅಭಿನಯದ ಭೀಮ ಚಿತ್ರವನ್ನು ನೋಡಿದ ತಂದೆಯೊಬ್ಬರು, ತಮ್ಮ ಮಗನಿಗೆ ಡ್ರಗ್ಸ್ ತಂದುಕೊಡುತ್ತಿದ್ದವರನ್ನು ಹಿಡಿದು ಕೊಟ್ಟಿದ್ದಾರೆ. ‘ಭೀಮ’ ಸಿನಿಮಾ ಕೆಲ ವಾರಗಳ ಹಿಂದಷ್ಟೇ ಬಿಡುಗಡೆ ಆಗಿ ಸಕ್ಸಸ್ ಆಗಿತ್ತು. ಸಿನಿಮಾದಲ್ಲಿ ಮಾದಕ ವಸ್ತುವಿಗೆ ಯುವಕರು ಬಲಿಯಾಗುತ್ತಿರುವ ರೀತಿಯನ್ನು ಮನರಂಜನೆಯ ಜೊತೆ ಜೊತೆಗೇ ತೋರಿಸಿದ್ದರು ದುನಿಯಾ ವಿಜಯ್. ಯುವಕರು ಹೇಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ, ಬೆಂಗಳೂರಿನ ಯುವಕರಿಗೆ ಮಾದಕ ವಸ್ತು ಅದೆಷ್ಟು ಸುಲಭವಾಗಿ ಸಿಗ್ತಾ ಇದೆ, ಯಾವ ಯಾವ ರೂಪದಲ್ಲಿ ಸಿಗ್ತಿದೆ ಅನ್ನದನ್ನೆಲ್ಲ ಯಥಾವತ್ತು ತೋರಿಸಿದ್ದರು.
ಸಿನಿಮಾ ಬಿಡುಗಡೆ ಆದ ಬಳಿಕವೂ ಕೂಡಾ ಮೆಡಿಕಲ್ ಶಾಪ್ಗಳಲ್ಲಿ ಕೆಲವು ಮಾತ್ರೆಗಳನ್ನು ಯಾವುದೇ ವೈದ್ಯರ ಪ್ರಿಸ್ಕ್ರಿಪ್ಷನ್ಗಳಿಲ್ಲದೆ ಮೆಡಿಕಲ್ ಶಾಪ್ಗಳವರು ನೀಡುತ್ತಿದ್ದಾರೆ ಎಂಬುದನ್ನು ವಿಡಿಯೋಗಳನ್ನು ಮಾಡಿ ತೋರಿಸಿದ್ದರು. ಇದೀಗ ದುನಿಯಾ ವಿಜಿ, ‘ಭೀಮ’ ಸಿನಿಮಾ ಮಾಡಿದ ಉದ್ದೇಶ ಸ್ವಲ್ಪ ಈಡೇರಿದಂತಿದೆ.
ಬೆಂಗಳೂರಿನ ವಾಲ್ಮೀಕಿ ನಗರದ ಇಕ್ಬಾಲ್ ಪಾಷಾ ಎಂಬುವರು ದುನಿಯಾ ವಿಜಯ್ ನಟಿಸಿರುವ ‘ಭೀಮ’ ಸಿನಿಮಾ ವೀಕ್ಷಿಸಿದ್ದರು. ಸಿನಿಮಾ ನೋಡಿದ ಬಳಿಕ ತಮ್ಮ 20 ವರ್ಷದ ಮಗನ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಮಗನ ಮೇಲೆ ಅನುಮಾನಗೊಂಡಿದ್ದರು. ಮಗ ಯಾವಾಗಲೂ ಒಬ್ಬನೇ ಇರುತ್ತಿದ್ದ. ಸದಾ ಮತ್ತಿನಲ್ಲಿರುವಂತೆ ಕಾಣುತ್ತಿದ್ದ. ಕಣ್ಣುಗಳ ಬಣ್ಣ ಬದಲಾಗುತ್ತಾ ಇದ್ದ ಎಲ್ಲವನ್ನೂ ಗಮನಿಸಿದ ಇಕ್ಬಾಲ್ ಪಾಷಾ ಮಗನ ಚಲನ ವಲನಗಳ ಮೇಲೆ ಕಣ್ಣಿರಿಸಿದ್ದರು. ಆಗ ಮಗ ಮಾತ್ರೆಗಳಿಗೆ ಅಡಿಕ್ಟ್ ಆಗಿರುವುದು ಗೊತ್ತಾಗಿದೆ.
ವಾಲ್ಮಿಕಿ ದೇವಾಲಯದ ಬಳಿ ಒಬ್ಬರೇ ನಿಂತು ಕೆಲವು ಅನುಮಾನಾಸ್ಪದ ವ್ಯಕ್ತಿಗಳ ಬಳಿ ಮಾತ್ರೆಗಳಿಗಾಗಿ ವಿಚಾರಿಸಿದ್ದಾರೆ. ಆಗ ಒಬ್ಬ ಅಪ್ರಾಪ್ತ ಯುವಕ ‘ನನ್ನ ಬಳಿ ಮಾತ್ರೆ ಇದೆ ಅದನ್ನು ತೆಗೆದುಕೊಂಡರೆ ದೇಹದಾರ್ಢ್ಯ ಹೆಚ್ಚಾಗುತ್ತದೆ ಒಂದು ಮಾತ್ರೆಗೆ 100 ರೂಪಾಯಿ’ ಎಂದಿದ್ದಾನೆ. ಆಗ ಇಕ್ಬಾಲ್, 200 ಕೊಟ್ಟು ಎರಡು ಮಾತ್ರೆ ಖರೀದಿ ಮಾಡಿದ್ದಾರೆ. ಬಳಿಕ ಅದನ್ನು ತೆಗೆದುಕೊಂಡು ಮೆಡಿಕಲ್ ಶಾಪ್ಗೆ ಹೋಗಿ ವಿಚಾರಿಸಿದಾಗ ಅದು ಪೇಯ್ನ್ ಕಿಲ್ಲರ್ ಮಾತ್ರೆಯಷ್ಟೇ ಅಲ್ಲ, ಆ ಮಾತ್ರೆಯಲ್ಲಿ ಮತ್ತು ಬರುವ ಅಂಶವಿರೋದು ಆ ಮಾತ್ರೆಯನ್ನು ನಶೆಗಾಗಿ ಬಳಸುವ ವಿಚಾರವನ್ನೂ ತಿಳಿದುಕೊಂಡಿದ್ದಾರೆ.
ಕೂಡಲೇ ಚಾಮರಾಜನಗರ ಪೊಲೀಸ್ ಠಾಣೆಗೆ ಹೋದ ಇಕ್ಬಾಲ್, ತನಗೆ ಮಾತ್ರೆ ಮಾರಾಟ ಮಾಡಿದ ಅಪ್ರಾಪ್ತ ವ್ಯಕ್ತಿ ಹಾಗೂ ಆತನ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆ ಅಪ್ರಾಪ್ತನನ್ನು ಬಂಧಿಸಿ, ಆತನಿಂದ 180 ಟೈಡಾಲ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಭೀಮನ ನಿಜವಾದ ಗೆಲುವು ಇದು.