ರಾಜ್ಯದಲ್ಲಿ ಮೂರು ಉಪಚುನಾವಣೆಗಳಿಗೆ ದಿನಾಂಕ ಘೋಷಣೆಯಾಗಿದೆ. ಈ ಮೂರೂ ಉಪಚುನಾವಣೆಗಳಲ್ಲಿ ಅತೀ ಹೆಚ್ಚು ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಅದು ಚನ್ನಪಟ್ಟಣ. ಇದು ಕುಮಾರಸ್ವಾಮಿ ತೆರವು ಮಾಡಿರುವ ಕ್ಷೇತ್ರ ಎನ್ನುವುದು ಒಂದು ಕಾರಣವಾದರೆ, ಡಿಕೆ ಸುರೇಶ್ ಸೋತ ನಂತರ ನಡೆಯುತ್ತಿರುವ ಉಪಚುನಾವಣೆಯೂ ಹೌದು. ಚನ್ನಪಟ್ಟಣ ಬರುವುದು ಸುರೇಶ್ ಅವರು ಸಂಸದರಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ. ಡಿಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರಕ್ಕೆ ಅಂಟಿಕೊಂಡಿರುವ ಕ್ಷೇತ್ರವೂ ಹೌದು. ಕ್ಯಾಂಡಿಡೇಟ್ ಯಾರು ಅನ್ನೋದು ಇನ್ನೂ ಫೈನಲ್ ಆಗಿಲ್ಲದ ಸಮಯದಲ್ಲಿ ನಡೆದಿರುವ ಒಂದು ಆಂತರಿಕ ಸಮೀಕ್ಷೆ, ಮೂರೂ ಪಕ್ಷಗಳ ನಾಯಕರಿಗೆ ಟೆನ್ಷನ್ ಕೊಟ್ಟಿರೋದು ನಿಜ.
ಸಿಪಿ ಯೋಗೇಶ್ವರ್ʻಗೆ ಏನು ಶಾಕ್ ಇದೆ..?
ಇದೇ ಕ್ಷೇತ್ರದಲ್ಲಿ ಅತೀ ಹೆಚ್ಚು ಬಾರಿ ಗೆದ್ದಿರೋದು ಸಿಪಿ ಯೋಗೇಶ್ವರ್. ಪಕ್ಷೇತರರಾಗಿ, ಸಮಾಜವಾದಿ ಪಕ್ಷ, ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿರುವ ಯೋಗೇಶ್ವರ್, ಸದ್ಯಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ. ಬಿಜೆಪಿಯಿಂದ ಮಾತ್ರ ಯೋಗೇಶ್ವರ್ ಅವರಿಗೆ ಗೆಲುವು ಸಿಕ್ಕಿಲ್ಲ. ಅವರಿಗೂ ಸಮೀಕ್ಷೆ ಶಾಕ್ ಕೊಟ್ಟಿದೆ.
ಜೆಡಿಎಸ್ ಚಿಹ್ನೆಯಿಂದ ಯಾರೇ ನಿಂತರೂ ಗೆಲ್ಲುವುದು ಕಷ್ಟ. ಬದಲಿಗೆ, ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ, ಗೆಲ್ಲುವ ಚಾನ್ಸ್ ಇದೆ. ಅದರಲ್ಲೂ, ಯೋಗೇಶ್ವರ್, ಪಕ್ಷೇತರರಾಗಿ ನಿಂತರೆ, ಮೈತಿ ಅಭ್ಯರ್ಥಿಗೆ ಗೆಲ್ಲುವುದು ಇನ್ನಷ್ಟು ದುಸ್ತರವಾಗಬಹುದು. ಆದರೆ ಬಿಜೆಪಿಯಿಂದ ನಿಂತರೆ ಗೆಲುವು ಯಾವ ರೀತಿ ತಿರುಗುವುದೋ.. ಹೇಳೋಕೆ ಸಾಧ್ಯವಾಗುತ್ತಿಲ್ಲ.
ಕುಮಾರಸ್ವಾಮಿಗೆ ವಿಚಿತ್ರ ಟೆನ್ಷನ್ ತಂದ ಸಮೀಕ್ಷೆ : ಪುತ್ರನನ್ನು ನಿಲ್ಲಿಸಬೇಕೋ, ಪತ್ನಿಯನ್ನು ಕಣಕ್ಕಿಳಿಸಬೇಕೋ, ಕ್ಷೇತ್ರದ ಬೇರೊಬ್ಬ ನಾಯಕರಿಗೆ ಚಾನ್ಸ್ ಕೊಡುವುದೋ ಅಥವಾ ಇವೆಲ್ಲವನ್ನೂ ಬಿಟ್ಟು, ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡುವುದೋ.. ಎಂಬ ಗೊಂದಲದಲ್ಲಿರುವ ಕುಮಾರಸ್ವಾಮಿ ಅವರಿಗೆ ಆಘಾತವಂತೂ ಇದೆ. ಸಮೀಕ್ಷಾ ವರದಿಯಲ್ಲಿ, ನಿಖಿಲ್ ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿ, ಯಾರೇ ನಿಂತರೂ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎನ್ನುವ ಅಂಶ, ವರದಿಯಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಕ್ಷೇತ್ರದಲ್ಲಿ ಪ್ರಭಾವ ಕಳೆದುಕೊಳ್ಳುತ್ತಿದೆ ಎನ್ನುತ್ತಿರುವ ವರದಿ, ಅದಕ್ಕೆ ಕಾರಣ ತೋರಿಸುತ್ತಿರುವುದು ಡಿಕೆ ಶಿವಕುಮಾರ್ ಹೆಸರನ್ನು.
ಡಿಕೆ ಶಿವಕುಮಾರ್ ಉತ್ಸಾಹಕ್ಕೆ.. ಅದೊಂದೇ ಅಡ್ಡಿ : ಕುಮಾರಸ್ವಾಮಿಯವರು ಯಾವಾಗ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೋ, ಮರುದಿನದಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಿಲ್ಲಾ ರಾಜಕೀಯದಲ್ಲಿ ಕಾರ್ಯೋನ್ಮುಖರಾಗಿದ್ದರು. ಸತತವಾಗಿ ಚನ್ನಪಟ್ಟಣ/ರಾಮನಗರ ಪ್ರವಾಸದ ಜೊತೆಗೆ, ಕ್ಷೇತ್ರದ ನಾಯಕರ ಜೊತೆಗೂ ಮಾತುಕತೆ ನಡೆಸುತ್ತಿದ್ದರು. ಏಪ್ರಿಲ್ ತಿಂಗಳಿಂದಲಲೂ ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಪಾರ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ದೊಡ್ಡ ಮಟ್ಟದಲ್ಲಿ ನಡೆಯುತ್ತಲೇ ಇದೆ. ಏಪ್ರಿಲ್ ತಿಂಗಳಲ್ಲೇ ರಾತ್ರೋರಾತ್ರಿ ಸ್ಥಳೀಯ ಮುಖಂಡ ಅಕ್ಕೂರುದೊಡ್ಡಿ ಶಿವಣ್ಣ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಮುಖಂಡರು, ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ಇದು ಒಂದು ಕಡೆಯಾದರೆ, ಇಡೀ ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣದಲ್ಲಿ ಮಾತ್ರ ಕಾಂಗ್ರೆಸ್ಸಿಗೆ ಶಕ್ತಿ ಕಡಿಮೆ ಎಂದೇ ಹೇಳಬಹುದು. ಕಳೆದ ಲೋಕಸಭೆಯಲ್ಲಿ ಸಿಕ್ಕ ೮೫ ಸಾವಿರ ಮತಗಳೇ ಕಾಂಗ್ರೆಸ್ ಪಡೆದುಕೊಂಡ ಅತೀ ಹೆಚ್ಚು ಮತಗಳು. ಕಳೆದ ಎರಡು ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ನಡುವೆಯೇ ಫೈಟ್. ಈಗ, ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ, ಕಾಂಗ್ರೆಸ್ ಮುನ್ನಲೆಗೆ ಬಂದಿದೆ.
ಇಷ್ಟೆಲ್ಲದರ ಮಧ್ಯೆ ನಿಖಿಲ್-ಸಿಪಿ ಯೋಗೇಶ್ವರ್- ಡಿಕೆ ಸುರೇಶ್ ಹೆಸರೇ ಕೇಳಿ ಬರುತ್ತಿದೆ. ವೇಯ್ಟ್ ಮಾಡಿ ನೋಡಬೇಕಷ್ಟೇ.