ಹನುಮ. ಇತ್ತೀಚೆಗೆ ಜನ ಹೆಚ್ಚೂಕಡಿಮೆ ಮರೆತು ಹೋಗಿದ್ದ ಸರಿಗಮಪ ಖ್ಯಾತಿಯ ಕಲಾವಿದ. ಒಂದೆರಡು ವರ್ಷಗಳ ಹಿಂದೆ ಯಾವುದೇ ನ್ಯೂಸ್ ಚಾನೆಲ್ ಹಾಕಲಿ, ಅಲ್ಲಿ ಯಾವುದಾದರೊಂದು ಚಾನೆಲ್ಲಿನಲ್ಲಿ ಸರಿಗಮಪ ಖ್ಯಾತಿಯ ಹನುಮನ ಹಾಡು ಕೇಳುತ್ತಲೇ ಇರುತ್ತಿತ್ತು. ಇದೀಗ ಮತ್ತೆ ಬಂದಿದ್ದಾನೆ. ಜೀ ಟಿವಿ ಕನ್ನಡದ ಸರಿಗಮಪ ಅಥವಾ ಮತ್ತಿತರ ಶೋಗಳಿಗೆ ಅಲ್ಲ. ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಶೋಗೆ.
ಗಾಯಕ ಹನುಮಂತ ಲಮಾಣಿ. ಹಾವೇರಿ ಜಿಲ್ಲೆಯ ಚಿಲ್ಲೂರು ಬಡ್ನಿ ಗ್ರಾಮದ ಕುರಿ ಕಾಯುತ್ತಿದ್ದ ಹುಡುಗ. ಯಾವುದೇ ಶಾಸ್ತ್ರೀಯ ಸಂಗೀತ ಅಭ್ಯಾಸದ ಹಿನ್ನೆಲೆ ಇಲ್ಲದ ಹನುಮ, ತನ್ನ ವಿಶಿಷ್ಟ ಧ್ವನಿಯಿಂದಲೇ ಖ್ಯಾತಿಗೆ ಬಂದವರು. ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ‘ಬಿಗ್ ಬಾಸ್’ ಕನ್ನಡ ಸೀಸನ್ 11 ಅನ್ನು ‘ಬಿಗ್ ಬಾಸ್’ ಹೊಸ ಅಧ್ಯಾಯ ಎಂದು ಕರೆಯಲಾಗುತ್ತಿದ್ದು, ಈ ಹೊಸ ಅಧ್ಯಾಯದ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯಾಗಿ ಹನುಮಂತ ಬಂದಿದ್ದಾರೆ.
ಹನುಮಂತ, ಹಾಡುಗಳಿಂದ ಅಲ್ಲ, ಮುಗ್ಧತೆಯಿಂದ ಖ್ಯಾತಿಗೆ ಬಂದ ಗಾಯಕ. ಇಲ್ಲಿಯೂ ಆತನ ಮುಗ್ಧತೆಯೇ ಹೈಲೈಟ್ ಆಗುವ ಸೂಚನೆಗಳಂತೂ ಇವೆ.
ಏಕೆಂದರೆ ಮೊದಲ ದಿನವೇ ಹೈಲೈಟ್ ಆಗಿರುವುದು ಹನುಮಂತ ಅವರಲ್ಲಿನ ಮುಗ್ಧತೆ. ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ಹನುಮಂತ ಎಲ್ರನ್ನೂ ಮಾತನಾಡಿಸುತ್ತಾರೆ. ನಂತರ ಡೈನಿಂಗ್ ಟೇಬಲ್ ಮೇಲೆ ಊಟ ಮಾಡುತ್ತಿರುತ್ತಾರೆ. ಆಗ ‘ಬಿಗ್ ಬಾಸ್’ ಧ್ವನಿ ಕೇಳಿಸುತ್ತದೆ. “ಹನುಮಂತ… ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ..” ಎಂದು ಬಿಗ್ ಬಾಸ್ ಹೇಳುತ್ತಾರೆ. ಆಗ ಹನುಮಂತ, “ಊಟ ಮಾಡಕ್ಕತ್ತೀನ್ರೀ.. ಇನ್ನು ಏನ್ ಮಾತಾಡಬೇಕು ಅನ್ನೋದು ತಲ್ಯಾಗೆ ಹೊಕ್ಕೊಂಡಿಲ್ಲ. ಆಮೇಲೆ ಮಾತಾಡ್ತಿನ್ರೀ..” ಎಂದು ಮುಗ್ಧತೆಯಿಂದ ಹೇಳಿದ್ದಾರೆ. ಈ ಮಾತನ್ನು ಕೇಳಿ ಇತರೆ ಸದಸ್ಯರು ನಗಾಡಿದ್ದಾರೆ.
ಇಂತಹ ಮುಗ್ಧತೆಯಿಂದಾಗಿ ಖ್ಯಾತಿ ಪಡೆದ ಹನುಮಂತ ಜೀ ಕನ್ನಡದ ‘ಸರಿಗಮಪ’ ಸೀಸನ್ 15 ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಶೋಗಳಲ್ಲಿ ಮಿಂಚಿದ್ದರು. ಡ್ರಾಮಾಗಳಲ್ಲಿಯೂ ನಟಿಸಿದ್ದರು. ಒಂದು ಸಿನಿಮಾದಲ್ಲಿಯೂ ಹಾಡಿದ್ದರು. , ‘ಬಿಗ್ ಬಾಸ್ ಕನ್ನಡ ಸೀಸನ್ 7’ರಲ್ಲಿಯೇ ಹನುಮಂತಗೆ ಆಫರ್ ಬಂದಿತ್ತು, ಆದರೆ ಅವರು ರಿಜೆಕ್ಟ್ ಮಾಡಿದ್ದರು ಅನ್ನೋ ಸುದ್ದಿ ಇತ್ತು. ಈಗ ಜೀಯವರ ಕಾರ್ಯಕ್ರಮಗಳಲ್ಲಿ ಹನುಮಂತ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಕಲರ್ಸ್ ಕನ್ನಡ ವಾಹಿನಿಗೆ ಬಂದಿದ್ದಾರೆ.