ದರ್ಶನ್ ಚಾರ್ಜ್ʻಶೀಟ್ ಗೌಪ್ಯ ಮಾಹಿತಿ ಪ್ರಕಟಿಸಬೇಡಿ. ಇದು ಎಲ್ಲ ಟಿವಿ, ಪತ್ರಿಕೆ, ವೆಬ್ʻಸೈಟ್, ಸೋಷಿಯಲ್ ಮೀಡಿಯಾ ಸೇರಿದಂತೆ ಮಾಧ್ಯಮಗಳಿಗೆ ಹೈಕೋರ್ಟ್ ನೀಡಿರುವ ಸೂಚನೆ. ಹಾಗಾದರೆ, ದರ್ಶನ್ ಕುರಿತ, ರೇಣುಕಾಸ್ವಾಮಿ ಮರ್ಡರ್ ಕುರಿತ ಯಾವುದೇ ಸುದ್ದಿಯನ್ನೂ ಪ್ರಸಾರ ಮಾಡುವಂತಿಲ್ಲವಾ.. ಈ ಪ್ರಶ್ನೆಗೆ ಸದ್ಯದ ಉತ್ತರ ನೋ. ಪ್ರಸಾರ ಮಾಡುವಂತಿಲ್ಲ. ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆದಂತಾಗುವುದಿಲ್ಲವೇ.. ಚಾರ್ಜ್ʻಶೀಟ್ ಅನ್ನೋದು ಪಬ್ಲಿಕ್ ಪ್ರಾಪರ್ಟಿ ಅಲ್ಲವೇ. ಇದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಬೇಕೆಂದರೆ ಇಡೀ ಪ್ರಕ್ರಿಯೆ ತಿಳಿದುಕೊಳ್ಳಬೇಕು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮುಗಿಸಿರುವ ಪೊಲೀಸರು ಎಲ್ಲ ಆರೋಪಿಗಳ ವಿರುದ್ಧ 3991 ಪುಟಗಳ ವಿವರವಾದ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಆರೋಪ ಪಟ್ಟಿಯಲ್ಲಿ ಕೊಲೆಯ ವಿವರ, ಸ್ಥಳ ಮಹಜರು, ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಸಾಕ್ಷಿಗಳ ಹೇಳಿಕೆ, ಸಾಕ್ಷ್ಯಗಳ ಮಾಹಿತಿ, ಫೋಟೋಗಳು ಇನ್ನೂ ಹಲವು ಅಂಶಗಳ ಪಿನ್ ಟು ಪಿನ್ ವಿವರಗಳು ಮೀಡಿಯಾಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ ಇದೀಗ ಹೈಕೋರ್ಟ್ ಸೂಚನೆಯೊಂದನ್ನು ನೀಡಿದ್ದು, ಆರೋಪ ಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದೆ. ಪತ್ರಿಕೆಗಳು ಮುದ್ರಿಸಬಾರದು ಹಾಗೂ ಯಾವುದೇ ಮಾಧ್ಯಮಗಳು ಈ ಕುರಿತು ಬರೆಯಬಾರದು ಎಂದು ಆದೇಶ ನೀಡಿದೆ. ಪ್ರಕರಣ ಕುರಿತಂತೆ ಚರ್ಚೆ ಮಾಡುವುದಾಗಲೀ, ಇತರರ ಹೇಳಿಕೆಗಳನ್ನು ಪ್ರಸಾರ ಮಾಡುವುದಾಗಲಿ ಮಾಡದಂತೆ ಆದೇಶ ನೀಡಿದೆ. ಆದರೆ ಇದು ಚಾರ್ಜ್ಶೀಟ್ ವಿವರಗಳ ಬಗ್ಗೆ ಮಾತ್ರ. ಸುದ್ದಿಯಲ್ಲಿನ ಬೆಳವಣಿಗೆಗಳ ಬಗ್ಗೆ ಅಲ್ಲ.
ಕೋರ್ಟಿನಲ್ಲಿ ಏನೇನಾಯ್ತು..?
ಮಾಧ್ಯಮಗಳಿಗೆ ನಿರ್ಬಂಧ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ದರ್ಶನ್ ಪರ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘‘ಮಾಧ್ಯಮಗಳು, ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುದ್ದಿಯನ್ನು ನಿರಂತರವಾಗಿ ವರದಿ ಮಾಡುತ್ತಿವೆ. ಪೂರ್ವಾಗ್ರಹಪೀಡಿತ ಭಾವನೆಯಲ್ಲೇ ಪ್ರಸಾರ ಮಾಡುತ್ತಿವೆ. ಆದ್ದರಿಂದ, ಮಾಧ್ಯಮಗಳನ್ನು ನಿಯಂತ್ರಿಸಲು ನಿರ್ದೇಶನ ನೀಡಬೇಕು’’ ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್. ‘‘ಭಾರತದಲ್ಲಿ ಕನಿಷ್ಠ 2 ಸಾವಿರ ಮಾಧ್ಯಮ ಸಂಸ್ಥೆಗಳಿವೆ. ಅವುಗಳಲ್ಲಿ ಯಾರನ್ನು ನಿಯಂತ್ರಿಸಬೇಕು. ಅಷ್ಟಕ್ಕೂ, ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಒಂದು ವೇಳೆ ಅವರು ನಿರ್ದಿಷ್ಟ ಮಾಧ್ಯಮ ಅಥವಾ ವಾಹಿನಿ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಬಹುದು’’ ಎಂದು ವಾದಿಸಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರಿಗೆ, ಆಕ್ಷೇಪಣೆ ಇರುವ ನಿರ್ದಿಷ್ಟ ಮಾಧ್ಯಮಗಳ ಕುರಿತು ಮೆಮೊ ಸಲ್ಲಿಸಿ ಎಂದು ನಿರ್ದೇಶಿಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತ್ತು.
ದರ್ಶನ್ ಪರ ವಕೀಲರ ವಾದದ ಪ್ರಮುಖ ಅಂಶಗಳು ಏನಿದ್ದವು..?
ರೇಣುಕಾಸ್ವಾಮಿ ಕುಟುಂಬದವರನ್ನು ಮಾತನಾಡಿಸಬಾರದು.
ತನಿಖೆಯಲ್ಲಿ ಲಭ್ಯವಾಗಿರುವ ಸಾಕ್ಷಿಗಳು, ತನಿಖೆಯಲ್ಲಿ ನೀಡಲಾಗಿರುವ ಹೇಳಿಕೆಗಳ ಬಗ್ಗೆ ಮಾಧ್ಯಮಗಳು ತನಿಖಾ ಸಂಸ್ಥೆಗಳಂತೆ ವಿಶ್ಲೇಷಣೆ ಮಾಡಬಾರದು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ತೀರ್ಪಿನ ಮೇಲೆ ಪ್ರಭಾವ ಬೀರುವ ರೀತಿಯ ವರದಿ ಮಾಡಲಾಗುತ್ತಿದೆ. ಪ್ರಕರಣವನ್ನು ಮರುಸೃಷ್ಟಿ ಮಾಡಲಾಗುತ್ತಿದೆ.
ಅತ್ಯಂತ ಸೂಕ್ಷ್ಮವಾದ ಕಾನ್ಫಿಡೆನ್ಷಿಯಲ್ ವಿಷಯಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇದು ತೀರ್ಪಿನ ಮೇಲೆ ಪ್ರಭಾವ ಬೀರುವುದಷ್ಟೇ ಅಲ್ಲ, ಆರೋಪಿಗಳ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ.
ಇದನ್ನು ನಿಲ್ಲಿಸಬೇಕು ಎಂದು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಮುಂದೇನು..?
ನ್ಯಾಯಾಲಯದ ಸೂಚನೆಯಂತೆ ಕೆಲವು ಮಾಧ್ಯಮ ಸಂಸ್ಥೆಗಳು ಯಾವೆಲ್ಲ ರೀತಿ ತಮ್ಮ ವಿರುದ್ಧ ಪೂರ್ವಗ್ರಹಪೀಡಿತ ವರದಿ ಮಾಡುತ್ತಿವೆ ಎಂದು ಹೇಳಬೇಕು. ಕೋರ್ಟಿಗೆ ಅದನ್ನು ಅರ್ಥ ಮಾಡಿಸಬೇಕು. ಆಗ ಸಾರಾಸಗಟಾಗಿ ಅಲ್ಲದೆ ಕೆಲವು ಸಂಸ್ಥೆ/ಚಾನೆಲ್/ಪತ್ರಿಕೆಗಳ ವಿರುದ್ಧ ಕೋರ್ಟ್ ನಿರ್ಬಂಧ ವಿಧಿಸಬಹುದು ಅಥವಾ ಇದು ಅಭಿವ್ಯಕ್ತಿ ಸ್ವಾತಂತ್ರ್ಯ. ಹೀಗಾಗಿ ಏನನ್ನೂ ಆದೇಶ ನೀಡುವುದು ಸಾಧ್ಯವಿಲ್ಲ ಎಂದು ಹೇಳಿ ಮಾಧ್ಯಮ ಸಂಸ್ಥೆಗಳಿಗೆ ಎಚ್ಚರಿಕೆ ಕೊಟ್ಟು ಸುಮ್ಮನಾಗಬಹುದು. ಎಲ್ಲ ರೀತಿಯ ಅವಕಾಶಗಳೂ ಇವೆ.