ಮುಜರಾಯಿ ದೇವಸ್ಥಾನಗಳು ಪದೇ ಪದೇ ಸದ್ದು ಮಾಡುತ್ತಿವೆ. ದೇವಸ್ಥಾನಗಳಿಗೆ ನೀಡುವ ಅನುದಾನ ಕಡಿತ ವಿಚಾರದಲ್ಲಿ ನೀಡಿದ್ದ ಆದೇಶವನ್ನು ಸರ್ಕಾರ ವಾಪಸ್ ತೆಗೆದುಕೊಂಡಿರುವ ಬೆನ್ನಲ್ಲೇ ಹೊಸ ಲಾಬಿ ಶುರುವಾಗಿದೆ. ಇದರಿಂದಾಗಿ ಮೊದಲ ಕಂತು ಬಿಡುಗಡೆಯಾಗಿ ಎರಡನೇ ಕಂತು ಬಿಡುಗಡೆಯಾಗುವ ಸಮಯದಲ್ಲಿ ತಡೆ ನೀಡುವುದಕ್ಕೆ ಅವಕಾಶ ನೀಡುವ ಕೃತ್ಯ ಎಂದು ಆರೋಪ ಮಾಡಿದ್ದವು ಪ್ರತಿಪಕ್ಷಗಳು. ಆದರೆ ಈ ವಿಷಯ ಅದಲ್ಲ, ಇದು ಶ್ರೀಮಂತ ದೇವಸ್ಥಾನಗಳಲ್ಲಿ ನಡೆಯುತ್ತಿರುವ ದೊಡ್ಡ ರಾಜಕೀಯ.
ದೊಡ್ಡ ದೊಡ್ಡ ಶ್ರೀಮಂತ ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿ ಎಂಬುದು ಇರುತ್ತದೆ. ಇದಕ್ಕೆ ಸರ್ಕಾರವೇ ನೇಮಕ ಮಾಡುತ್ತದೆ. ಅಂತಹ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗಲು ದೊಡ್ಡ ಪೈಪೋಟಿಯೇ ನಡೆಯುತ್ತದೆ. ಅದರಲ್ಲೂ ದೇವಸ್ಥಾನ ಶ್ರೀಮಂತವಾಗಿದ್ದರೆ ಸ್ಪರ್ಧೆ ಜೋರಾಗಿ ನಡೆಯುತ್ತದೆ. ರಾಜ್ಯದ ಎ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ ಜವಾಬ್ದಾರಿ ರಾಜ್ಯ ಧಾರ್ಮಿಕ ಪರಿಷತ್ ಆಗಿದ್ದರೆ, ಬಿ ಮತ್ತು ಸಿ ಗ್ರೇಡ್ ದೇವಾಲಯಗಳ ಅಂತಿಮ ಪಟ್ಟಿ ಜಿಲ್ಲಾ ಮಟ್ಟದಲ್ಲೇ ಆಯ್ಕೆಯಾಗುತ್ತದೆ. ರಾಜ್ಯದಲ್ಲಿ 205 ಎ ಗ್ರೇಡ್, 330 ಬಿ ಗ್ರೇಡ್ ಹಾಗೂ 34,700 ಸಿ ಗ್ರೇಡ್ ದೇಗುಲಗಳಿವೆ. 25 ಲಕ್ಷ ರೂ.ಗೂ ಅಧಿಕ ಆದಾಯವಿದ್ದರೆ ಎ ಗ್ರೇಡ್, 5 ರಿಂದ 25 ಲಕ್ಷ ರೂ. ಆದಾಯವಿದ್ದರೆ ಬಿ ಗ್ರೇಡ್ ಮತ್ತು 1 ರಿಂದ 5 ಲಕ್ಷ ಆದಾಯವಿದ್ದರೆ ಸಿ ಗ್ರೇಡ್ ಎಂದು ವರ್ಗೀಕರಿಸಲಾಗಿದೆ.
175 ಎ ಗ್ರೇಡ್ ದೇವಸ್ಥಾನಗಳಲ್ಲಿ ಅಂದರೆ ಅಂದರೆ ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ, ನಂಜನಗೂಡು ನಂಜುಂಡೇಶ್ವರ, ಚಾಮುಂಡಿ ದೇವಸ್ಥಾನ, ನಿಮಿಷಾಂಬ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ, ಸವದತ್ತಿಯ ಯಲ್ಲಮ್ಮ, ಬನಶಂಕರಿ.. ಹೀಗೆ ೨೦೫ಕ್ಕೂ ಹೆಚ್ಚು ದೇವಸ್ಥಾಗಳಿವೆ.
ರಾಜ್ಯದಲ್ಲಿ ಒಟ್ಟು 205 ಎ ಗ್ರೇಡ್ ದೇವಾಲಯಗಳಿದ್ದು, ಬೆಂಗಳೂರು ನಗರದ 4, ಬಳ್ಳಾರಿ 4, ಬೆಳಗಾವಿ 3, ಚಿಕ್ಕಗಳೂರು 3, ದಕ್ಷಿಣ ಕನ್ನಡ 25, ಹಾಸನ 5, ಮಂಡ್ಯ 6, ಮೈಸೂರು 5, ರಾಮನಗರ 3, ಶಿವಮೊಗ್ಗ 5, ತುಮಕೂರು 10, ಉಡುಪಿ 20, ಉತ್ತರ ಕನ್ನಡ 5 ದೇಗುಲ ಸೇರಿದಂತೆ 100ಕ್ಕೂ ಅಧಿಕ ದೇವಾಲಗಳ ವ್ಯವಸ್ಥಾಪನಾ ಸಮಿತಿ ರಚನೆ ಬಾಕಿಯಿದೆ. ಜುಲೈನಲ್ಲಿ ನಡೆದ ಪರಿಷತ್ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ 7, ರಾಯಚೂರು 1, ಮೈಸೂರು 9, ಉಡುಪಿ 4, ಮಂಡ್ಯ 14, ಚಿಕ್ಕಬಳ್ಳಾಪುರ 1, ಬೆಳಗಾವಿ 1 ದೇಗುಲಗಳ ಸಮಿತಿಗೆ ಒಪ್ಪಿಗೆ ಸೂಚಿಸಲಾಗಿದೆ.
ಅವಧಿ ಮುಗಿದ ಎ, ಬಿ, ಸಿ ದರ್ಜೆ ದೇವಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಗಿದಿವೆ. ಪ್ರತಿಯೊಂದು ದೇವಳಗಳಲ್ಲೂ 9 ಸ್ಥಾನಗಳಿಗೆ ಜಾತಿ ಆಧಾರದ ಮೇಲೂ ನೇಮಕ ನಡೆಯಲಿದೆ. ಪರಿಶಿಷ್ಟ ಜಾತಿ, ಮಹಿಳೆ, ಸಾಮಾನ್ಯ, ಅರ್ಚಕ ವಿಭಾಗದಲ್ಲಿ ನೇಮಕ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಆಯ್ಕೆ ನಡೆಯುತ್ತಿದ್ದು, ವ್ಯವಸ್ಥಾಪನಾ ಸಮಿತಿಗೆ ಆಯ್ಕೆಯಾಗ ಬಯಸುವವರ ಲಾಬಿ ಜೋರಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆದಾಯ ಕಡಿಮೆಯಿರುವ ಸಿ ಗ್ರೇಡ್ ದೇವಾಲಯಗಳಲ್ಲೂ ಅಧಿಕಾರಕ್ಕಾಗಿ ಲಾಬಿ ಜೋರಾಗಿದೆ.
ರಾಜ್ಯದ ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಕದ್ರಿ ಶ್ರೀ ಮಂಜುನಾಥ, ಕೊಲ್ಲೂರು ದೇಗುಲ ದೇವಳಗಳ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಹಾಕಿರುವವರ ಸಂಖ್ಯೆ 100ರ ಗಡಿಯನ್ನೂ ದಾಟಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 127, ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ 64, ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ 45 ಅರ್ಜಿ ಸಲ್ಲಿಕೆಯಾಗಿದೆ. ರಾಜ್ಯ ಧಾರ್ಮಿಕ ಪರಿಷತ್ನಲ್ಲಿ ವ್ಯವಸ್ಥಾಪನಾ ಸಮಿತಿ ಆಯ್ಕೆ ನಡೆಯುತ್ತಿರುವ ಕಾರಣ ಮುಖ್ಯಮಂತ್ರಿ, ಮುಜರಾಯಿ ಸದಸ್ಯರು, ಉಸ್ತುವಾರಿ ಸಚಿವರು, ಸ್ಪೀಕರ್ ಮೂಲಕ ಲಾಬಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಚಿವ ರಾಮಲಿಂಗಾ ರೆಡ್ಡಿಯವರಿಗಂತೂ ಪ್ರತಿದಿನವೂ ಈ ಕುರಿತು ಒತ್ತಡ ಬರುತ್ತಿವೆಯಂತೆ.