ಯಡಿಯೂರಪ್ಪ, ರಾಜ್ಯ ಬಿಜೆಪಿಯ ಪಾಲಿಗೆ ಭೀಷ್ಮ ಎನ್ನಬಹುದು. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಹಲವರ ಕೊಡುಗೆ ಇದೆಯಾದರೂ, ಯಡಿಯೂರಪ್ಪನವರ ಪಾಲು ದೊಡ್ಡದು. ವಿಶೇಷ ಎಂದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ ನಿರ್ವಿವಾದವಾಗಿ ಯಡಿಯೂರಪ್ಪ ಅವರಿಗೆ ಪೈಪೋಟಿ ಇರಲಿಲ್ಲ. ಆದರೆ, ಅಧಿಕಾರಕ್ಕೆ ಏರುತ್ತಿದ್ದಂತೆಯೇ ತಮ್ಮದೇ ಪಕ್ಷದ ಶತ್ರುಗಳಿಂದ ಇನ್ನಿಲ್ಲದ ಕಾಟ ಎದುರಿಸಿದವರು ಸ್ವತಃ ಯಡಿಯೂರಪ್ಪ. ಇದೀಗ ಅವರ ಪುತ್ರ ವಿಜಯೇಂದ್ರ ಕೂಡಾ ಅದೇ ದಾರಿಯಲ್ಲಿದ್ದಾರೆಯೇ ಎಂಬ ಕುತೂಹಲಕರ ಪ್ರಶ್ನೆ ಎದುರಾಗಿದೆ.
ಏಕೆಂದರೆ ವಿಜಯೇಂದ್ರ ಅವರಿಗೆ ಟಿಕೆಟ್ ಪಡೆಯುವುದು, ಗೆಲ್ಲವುದು ಎಷ್ಟು ಸವಾಲಾಗಿತ್ತೋ.. ಅಷ್ಟೇ ದೊಡ್ಡ ಸವಾಲು ಈಗ ಪಕ್ಷದ ಅಧ್ಯಕ್ಷರಾದ ಮೇಲೆಯೂ ಶುರುವಾಗಿದೆ. ವಿಶೇಷ ಎಂದರೆ ಯಡಿಯೂರಪ್ಪ ವಿರುದ್ಧ ಗುಡುಗುತ್ತಿದ್ದ ನಾಯಕರೆಲ್ಲರೂ, ಈಗ ವಿಜಯೇಂದ್ರ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ಆರ್ ಎಸ್ ಎಸ್ ನಾಯಕರು ನಡೆಸಿದ ಸಭೆಯಲ್ಲಿ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಳಿಗೆಲ್ಲ ವಿಜಯೇಂದ್ರ ಬಹಿರಂಗವಾಗಿಯೇ ಉತ್ತರ ಕೊಟ್ಟಿದ್ದಾರೆ.
ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಟೀಕೆಗಳನ್ನು ತಳ್ಳಿಹಾಕಿರುವ ವಿಜಯೇಂದ್ರ ತಾವು ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಎಂಬ ಬಗ್ಗೆ ಹೆಮ್ಮೆ ಇದೆ. ಆದರೆ ದುರಹಂಕಾರ ಇಲ್ಲ ಎಂದು ಹೇಳಿದ್ದಾರೆ.
ಕೆಲವು ನಾಯಕರು ತಮ್ಮ ನಾಯಕತ್ವವನ್ನು ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಂಡು, ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ಸಾಧಿಸುವತ್ತ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಮತ್ತು ಯಡಿಯೂರಪ್ಪ ಜೊತೆಗೆ ಪಕ್ಷವನ್ನು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಕೆಲವು ಮುಖಂಡರ ಆರೋಪವನ್ನು ತಳ್ಳಿ ಹಾಕಿರುವ ವಿಜಯೇಂದ್ರ ಎಲ್ಲವನ್ನೂ ಪಕ್ಷದ ಹಿತಾಸಕ್ತಿಯಿಂದ ನುಂಗಿಕೊಳ್ಳುತ್ತೇನೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಮುಂದಿರುವ ಗುರಿ. ನಾನು ಆ ದಿಕ್ಕಿನಲ್ಲಿ ಹೋಗುತ್ತಿದ್ದೇನೆ ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ನಾನು ಜವಾಬ್ದಾರಿಯನ್ನು ನಿರ್ವಹಿಸುವ ಇಚ್ಛೆ ಮತ್ತು ಸಾಮರ್ಥ್ಯ ಎರಡನ್ನೂ ಹೊಂದಿರುವುದರಿಂದ, ಹಿರಿಯರು ನನಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ನಾನು ಅದನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ ಎನ್ನುವುದು ವಿಜಯೇಂದ್ರ ಅವರ ವಾದ ಮತ್ತು ಭರವಸೆ.
ಇದೇ ಪರಿಸ್ಥಿತಿಯನ್ನು ಯಡಿಯೂರಪ್ಪ ಕೂಡಾ ಎದುರಿಸಿದ್ದರು. ಮೊದಲ ಬಾರಿ ಸಿಎಂ ಆದಾಗ, ಬಿಜೆಪಿಯಲ್ಲೇ ಶತ್ರುಗಳು ಉದ್ಭವವಾಗಿದ್ದರು. ಕೊನೆಗೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದು, ಪಕ್ಷವನ್ನೇ ತೊರೆದು ಕೆಜೆಪಿ ಕಟ್ಟಿದ್ದರು. ಆಗ ಬಿಜೆಪಿ ಪ್ರತಿಪಕ್ಷ ಸ್ಥಾನವನ್ನೂ ಪಡೆಯಲು ವಿಫಲವಾಗಿತ್ತು. ಆಮೇಲೆ ರಾಜ್ಯದಲ್ಲಿ ಬಿಜೆಪಿ ಮತ್ತೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಯಡಿಯೂರಪ್ಪ ಪುನರಾಗಮನದ ನಂತರ. ಅಷ್ಟೇ ಏಕೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯ ಹಿನ್ನಡೆಗೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು, ವಿಜಯೇಂದ್ರ ಅವರ ವಿರುದ್ಧ ಸಂಚುಗಳು ನಡೆಯುತ್ತಲೇ ಹೋಗಿದ್ದು, ಟಿಕೆಟ್ ಮತ್ತು ಪ್ರಚಾರದ ವಿಷಯದಲ್ಲಿಯೂ ಕಡೆಗಣಿಸಿದ್ದು ಕೂಡಾ ಕಾರಣ ಎನ್ನುವುದು ರಹಸ್ಯವೇನಲ್ಲ. ಅದನ್ನು ಆರ್ ಎಸ್ ಎಸ್ ಸಭೆಯಲ್ಲಿ ನೆನಪಿಸಲಾಗಿದೆ. ಆದರೆ, ಬಂಡಾಯ ಎದ್ದಿರುವ ಯತ್ನಾಳ್, ಜಾರಕಿಹೊಳಿ ಮೊದಲಾದವರಿಗೆ ಈ ಮಾತು ಒಪ್ಪಿಗೆಯಾಗಿಲ್ಲ.
ಇತ್ತ ವಿಜಯೇಂದ್ರ ಮಾತ್ರ.. ಯಡಿಯೂರಪ್ಪ ಅವರಂತೆಯೇ ಮಾತನಾಡುತ್ತಿದ್ದಾರೆ. ಟೀಕೆ ಮಾಡಿದವರ ಬಗ್ಗೆ ಒಂದು ಮಾತು ಕೂಡಾ ಟೀಕೆ ಮಾಡುತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಾಗಿ ಅದು ಅವರಿಗೆ ಅನಿವಾರ್ಯವೂ ಇರಬಹುದು.