ಜೋಕುಮಾರಸ್ವಾಮಿ ಹಬ್ಬ. ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಪಾರಂಪರಿಕ ಜನಪದ ಆಚರಣೆ. ಜೋಕುಮಾರಸ್ವಾಮಿ ಜನಿಸುವುದು ಗಣೇಶ ಚತುರ್ಥಿಯ 5ನೇ ದಿವಸಕ್ಕೆ. ಮಣ್ಣಿನ ರೂಪ.. ಬಾಯಿಗೆ ಬೆಣ್ಣೆ.. ಕಯ್ಯಲ್ಲಿ ಚೂರಿ ಹಿಡಿದು ಬುಟ್ಟಿಯಲ್ಲಿ ಕುಳಿತುಕೊಳ್ಳುವ ಜೋಕುಮಾರಿಯದ್ದು ವಿಚಿತ್ರ ಆಕಾರ. ವಿರೂಪವಾಗಿಯೂ ಇರುವ ಜೋಕುಮಾರಸ್ವಾಮಿಯ ಮೂರ್ತಿಯನ್ನು ಮಣ್ಣಿನಲ್ಲಿ ಮಾಡ್ತಾರೆ. ಮಣ್ಣಿನ ಮೂರ್ತಿಯನ್ನು ಮೂರು ಬಾರಿ ಎತ್ತಿ ಕೆಳಕ್ಕೆ ಇಳಿಸಿದರೆ ಹರಕೆ ತೀರಿದಂತೆ. ಅಂದಹಾಗೆ ದರ್ಶನ್ ಅಭಿಮಾನಿಯೊಬ್ಬ ಜೋಕುಮಾರಸ್ವಾಮಿಗೆ ದರ್ಶನ್ ಕುರಿತಂತೆ 3 ಪ್ರಶ್ನೆ ಕೇಳಿದ್ದಾರೆ.
ಜೋಕುಮಾರಸ್ವಾಮಿಯನ್ನು ಪರಶಿವನ ಪುತ್ರ ಎಂದೇ ನಂಬುತ್ತಾರೆ. ಈ ಮೂರ್ತಿಯನ್ನು ಕೋಲಿ ಸಮಾಜದ ಮಹಿಳೆಯರು ಬುಟ್ಟಿಯೊಂದರಲ್ಲಿ ಇಟ್ಟುಕೊಂಡು ಮನೆ ಮನೆಗೆ ಹೋಗುತ್ತಾರೆ. ಹಾಗೆ ಹೋದಾಗ ಬೆಣ್ಣೆ, ಕಾಳುಗಳನ್ನೇ ನೈವೇದ್ಯವಾಗಿ ಇಡುವುದು ವಾಡಿಕೆ. ಗಣೇಶ ಚತುರ್ಥಿಯಾದ 5ನೇ ದಿನಕ್ಕೆ ಹುಟ್ಟುವ ಜೋಕುಮಾರಸ್ವಾಮಿ, ಒಂದು ವಾರದೊಳಗೆ ಸಾಯುತ್ತಾನೆ ಎನ್ನುವುದು ನಂಬಿಕೆ. ಅದಕ್ಕೆ ಮುನ್ನ ಜೋಕುಮಾರಸ್ವಾಮಿ ಭವಿಷ್ಯ ನುಡಿಯುತ್ತಾನೆ. ಅಂದರೆ ಭಕ್ತರು ಕೇಳುವ ಪ್ರಶ್ನೆಗಳು ಆಗುತ್ತವೆ ಎಂದರೆ ಜೋಕುಮಾರಸ್ವಾಮಿ ಬುಟ್ಟಿ ಹಗುರಾಗುತ್ತದೆ. ಆಗುವುದಿಲ್ಲ ಎಂದರೆ ಅದೇ ಬುಟ್ಟಿ ಭಾರವಾಗುತ್ತದೆ.
ವಿಜಯಪುರ ನಗರದ ಗೋಳಗುಮ್ಮಟ ಏರಿಯಾ ನಿವಾಸಿ ಸಚಿನ ಜಮಾದಾರ್ ಎನ್ನುವ ದರ್ಶನ್ ಅಭಿಮಾನಿ ಈ ಜೋಕುಮಾರಸ್ವಾಮಿ ಎದುರು ದರ್ಶನ್ ಕುರಿತಂತೆ 3 ಪ್ರಶ್ನೆ ಇಟ್ಟಿದ್ದಾರೆ. ಜೋಕುಮಾರ ಸ್ವಾಮಿ ಕುಳಿತಿರುವ ಬುಟ್ಟಿ ಹಗುರಾಗಿ ಬಂದರೆ ಒಳ್ಳೆಯದಾಗುತ್ತದೆ, ಭಾರವಾಗಿ ಕೈಗೆ ಆಗುವುದಿಲ್ಲ ಅಥವಾ ಕೆಟ್ಟದಾಗುತ್ತದೆ ಎನ್ನುವುದು ಭಕ್ತರ ನಂಬಿಕೆ.
ದರ್ಶನ್ ಕುರಿತಂತೆ ಸಚಿನ ಜಮಾದಾರ್ 3 ಪ್ರಶ್ನೆ ಕೇಳಿದ್ದಾರೆ.
ದರ್ಶನ್ ರಿಲೀಸ್ ಯಾವಾಗ ಆಗಲಿದೆ..
ಎನ್ನುವುದು ಮೊದಲ ಪ್ರಶ್ನೆಯಾದರೆ..
ಎರಡನೇ ಪರಶ್ನೆ ದರ್ಶನ್ ಸಿನಿಮಾಗಳ ಕಥೆ ಏನಾಗಲಿದೆ.. ಅನ್ನೋದು.
3ನೇ ಪ್ರಶ್ನೆ ಡೆವಿಲ್ ಸಿನಿಮಾ ಹಿಟ್ ಆಗುತ್ತಾ ಎನ್ನುವುದು.
ಜೋಕುಮಾರಸ್ವಾಮಿ ಇನ್ನು 3 ತಿಂಗಳ ನಂತರ ದರ್ಶನ್ ಬಿಡುಗಡೆ ಆಗಬಹುದು ಎನ್ನುವ ಸೂಚನೆ ಕೊಟ್ಟಿದ್ದು, ಡೆವಿಲ್ ಹಿಟ್ ಆಗಲಿದೆ ಎಂದು ಭವಿಷ್ಯ ಹೇಳಿದ್ಯಂತೆ. ಅಂದರೆ ಈ ಎರಡೂ ಪ್ರಶ್ನೆಗಳಿಗೆ ಜೋಕುಮಾರಸ್ವಾಮಿಯ ಬುಟ್ಟಿ ಹಗುರಾಗಿದೆ. ಆದರೆ, ಮುಂದೇನು..? ಸಂಕಷ್ಟ ಇಲ್ಲವಾ..? ಎಂಬ ಪ್ರಶ್ನೆಗೆ ಜೋಕುಮಾರಸ್ವಾಮಿಯ ಬುಟ್ಟಿ ಭಾರವಾಗಿದೆ.
ಇತಿಹಾಸ ಮತ್ತು ನಂಬಿಕೆ :
ಅಂದಹಾಗೆ ಈ ಜೋಕುಮಾರಸ್ವಾಮಿಯ ಬಗ್ಗೆ ಶ್ರೀಧರಾಚಾರ್ಯರ ಜಾತಕ ತಿಲಕ (ಕ್ರಿ.ಶ.1049)ದಲ್ಲಿ ಮೊದಲ ಉಲ್ಲೇಖ ಇದೆ. ಬಂಧುವರ್ಮನ ಜೀವ ಸಂಬೋಧನೆ (ಕ್ರಿ.ಶ.1150), ನೇಮಿಚಂದ್ರನ ನೇಮಿನಾಥ ಪುರಾಣ (ಕ್ರಿ.ಶ.1170) ಅಷ್ಟೇ ಏಕೆ, ಬಸವಣ್ಣನವರ ವಚನಗಳಲ್ಲಿಯೂ ಉಲ್ಲೇಖ ಇದೆ.
ಸಂಶೋಧಕ ಚಿದಾನಂದ ಮೂರ್ತಿಯವರ ಪ್ರಕಾರ ಜೋಕುಮಾರನು ಹುಟ್ಟಿದ್ದು ಭಾದ್ರಪದ ಶುದ್ದ ಅಷ್ಡಮಿಯ ದಿನ. ಅದಕ್ಕೆ ಅವರು ಮೈಸೂರು ಪ್ರಾಚ್ಯಕೋಶಾಗಾರದ ಕೆ-320 ಸಂಖ್ಯೆಯ ಹಸ್ತಪ್ರತಿ ಪತ್ರ 52ನ್ನೂ ಆಧಾರವಾಗಿ ತೋರಿಸುತ್ತಾರೆ.
ಜೋಕುಮಾರಸ್ವಾಮಿಯ ವಿಗ್ರಹ ಮಾಡುವವರು ಗಣೇಶನ ವಿಗ್ರಹ ಮಾಡುವವರೇ ಆಗಿರುತ್ತಾರೆ. ಈ ಜೋಕುಮಾರನ ಮೊದಲ ಪೂಜೆ ಮಾಡುವುದು ಊರ ಗೌಡ. ನಂತರ 6 ದಿನ ಮನೆ ಮನೆಯಲ್ಲೂ ಪೂಜೆ ನಡೆಯುತ್ತದೆ. 7ನೇ ದಿನ ಜೋಕುಮಾರಸ್ವಾಮಿಯ ವಿಗ್ರಹವನ್ನು ಹೊಲೇರ ಓಣಿಯಲ್ಲಿಟ್ಟು ಬರುತ್ತಾರೆ. ಅಲ್ಲಿ ಹೊಲೆಯರು ವಿಗ್ರಹವನ್ನು ಎತ್ತಿ ಮಳೆ-ಬೆಳೆ ಭವಿಷ್ಯ ಕೇಳುತ್ತಾರೆ. ನಂತರ ವಿಗ್ರಹವನ್ನು ಒನಕೆಯಿಂದ ಹೊಡೆಯುತ್ತಾರೆ. ಕುತ್ತಿಗೆ ತೆಗೆಯುತ್ತಾರೆ. ಹಾಗೆ ಕುತ್ತಿಗೆ ಹೊಡೆದು ಕೊಂದ ಮೇಲೆ ವಿಗ್ರಹವು ಬೋರಲು ಬಿದ್ದಿದ್ದರೆ, ದೇಶಕ್ಕೆ ಕೇಡುಗಾಲವೆಂದೂ, ಅಂಗಾತ ಬಿದ್ದರೆ ದೇಶಕ್ಕೆ ಸುಖ ಎಂದೂ ನಂಬುತ್ತಾರೆ. ನಂತರ ವಿಗ್ರಹವನ್ನು ಹಳ್ಳದಲ್ಲಿ ವಿಸರ್ಜನೆ ಮಾಡುತ್ತಾರೆ. ವಿಸರ್ಜನೆಯಾದ 3 ದಿನ ಊರಿನ ಅಗಸರು ಹಳ್ಳದಲ್ಲಿ ಅರಿವೆ ತೊಳೆಯುವುದಿಲ್ಲ.