ತಿರುಪತಿ ಲಡ್ಡು, ತಿಮ್ಮಪ್ಪನ ಲಡ್ಡು, ವೆಂಕಟರಮಣನ ಲಾಡು.. ಎಂದೆಲ್ಲ ಖ್ಯಾತಿ ಪಡೆದಿರುವ ತಿರುಪತಿ ಲಾಡುವಿಗೆ ಬೇರೆಯದೇ ರುಚಿ. ತಿಮ್ಮಪ್ಪನಿಗೆ ಹೋಗುವ ಭಕ್ತರು, ಲಡ್ಡುಗಳನ್ನು ಕೈತುಂಬಾ ತೆಗೆದುಕೊಂಡು ಬರುತ್ತಾರೆ. ಅಂತಹ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗುತ್ತಿತ್ತಾ.. ಹೌದು ಎನ್ನುವ ಉತ್ತರ ಕೊಟ್ಟಿರುವುದು ಯಾರೋ ಹೋರಾಟಗಾರ, ಅಂಧಭಕ್ತ ಅಲ್ಲ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.
ಸಾಮಾನ್ಯವಾಗಿ ತಿರುಮಲ ಲಡ್ಡು ಪ್ರಸಾದಕ್ಕೆ ಶುದ್ಧ ಹಸುವಿನ ತುಪ್ಪ ಬಳಸಬೇಕು ಆದರೆ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುವ ಮೂಲಕ ವೆಂಕಟೇಶ್ವರ ಸ್ವಾಮಿಗೆ ಅವಮಾನ ಮಾಡಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಎಲ್ಲ ಗುಣಮಟ್ಟದ ಪದಾರ್ಥಗಳೊಂದಿಗೆ ಲಡ್ಡು ಪ್ರಸಾದವನ್ನು ತಯಾರಿಸುತ್ತಿದ್ದೇವೆ ಎಂದಿದ್ದಾರೆ ಚಂದ್ರಬಾಬು ನಾಯ್ಡು.
ಎನ್ಡಿಎ ಸಮ್ಮಿಶ್ರ ಸರ್ಕಾರ ರಚನೆಯಾಗಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳಗಿರಿಯ ಸಿಕೆ ಕನ್ವೆನ್ಷನ್ ಹಾಲ್ನಲ್ಲಿ ಎನ್ಡಿಎ ಮೈತ್ರಿಕೂಟದ ಶಾಸಕರು, ಸಂಸದರು ಮತ್ತು ಎಂಎಲ್ಸಿಗಳ ಸಭೆ ನಡೆಯಿತು. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹಿಂದಿನ ಜಗನ್ ಸರ್ಕಾರ ತಿರುಮಲ ಪ್ರಸಾದ ಕಲಬೆರಕೆ ಮಾಡುವ ಮೂಲಕ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದು ಅಪವಿತ್ರಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಸಿಎಂ ಆಗಿದ್ದಾಗ ತಿರುಪತಿಯಲ್ಲಿ ಧರ್ಮ ವಿರೋಧಿ ಕೆಲಸಗಳನ್ನು ಮಾಡಿದ್ದಾರೆ ಎಂಬ ಆರೋಪಗಳು ಹೊಸದೇನಲ್ಲ. ಈ ಬಾರಿಯೂ ಅಷ್ಟೆ, ತಿರುಪತಿ ಲಡ್ಡುವಿನಲ್ಲಿ ಕೊಬ್ಬು ಬಳಸಿದ್ದರು ಎಂಬ ಆರೋಪವನ್ನು ವೈಎಸ್ಆರ್ಪಿ ಶಾಸಕರು ಹಾಗೂ ಸಂಸದರು ನಿರಾಕರಿಸಿದ್ದಾರೆ. ರಾಜಕೀಯ ಮೈಲೇಜ್ ಪಡೆಯುವುದಕ್ಕಾಗಿ ಚಂದ್ರಬಾಬು ನಾಯ್ಡು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಇದೊಂದು ಕಪೋಲಕಲ್ಪಿತ ಆರೋಪ ಎಂದು ಉತ್ತರ ಕೊಟ್ಟಿದ್ದಾರೆ.
ಈ ಹಿಂದೆಯೂ ತಿರುಪತಿ ಟ್ರಸ್ಟ್ʻಗೆ ತಮ್ಮ ಸಂಬಂಧಿ ಕ್ರೈಸ್ತ ಸಮುದಾಯದವರನ್ನು ನೇಮಕ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಹಾಗೆ ನೇಮಕಗೊಂಡಿದ್ದ ಸುಬ್ಬಾ ರೆಡ್ಡಿ ಹಿಂದೂ ಆಗಿದ್ದರು. ಪ್ರತಿದಿನ ಪೂಜೆ, ಪುನಸ್ಕಾರ ಮಾಡುತ್ತಿದ್ದರು. ಪ್ರತಿ ವರ್ಷ ಅಯ್ಯಪ್ಪ ಮಾಲೆ ಧರಿಸಿ ಕಠೋರ ವ್ರತ ಮಾಡುತ್ತಿದ್ದರು ಎಂಬ ವಿಷಯವೂ ಗೊತ್ತಾಗಿತ್ತು.
ಆದರೆ ಸ್ವತಃ ಜಗನ್ ಶಿಲುಬೆ ಹಾಕಿಕೊಂಡು ಕಾಣಿಸಿಕೊಳ್ಳುತ್ತಾರೆ. ಇದರಿಂದಾಗಿ ವಿವಾದ ದೊಡ್ಡದಾಗಿತ್ತು.
ಇನ್ನು ತಿರುಪತಿಗೆ ಪ್ರತಿ ದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಲಕ್ಷ ಲಕ್ಷ ಲಡ್ಡುಗಳು ಮಾರಾಟವಾಗುತ್ತವೆ. ಕರ್ನಾಟಕದ ಕೆಎಂಎಫ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪೆನಿಗಳು ಲಡ್ಡು ತಯಾರಿಗೆ ತುಪ್ಪ ಸರಬರಾಜು ಮಾಡುತ್ತವೆ. ಚಂದ್ರಬಾಬು ನಾಯ್ಡು ಆರೋಪಕ್ಕೆ ತಕ್ಕಂತೆ ಜಗನ್ ಅವಧಿಯಲ್ಲಿ ತುಪ್ಪದ ಪ್ರಮಾಣ ಇಳಿಕೆಯಾಗಿತ್ತು ಎಂಬ ವರದಿಗಳೂ ಕೂಡಾ ಇದಕ್ಕೆ ಪುಷ್ಠಿ ಕೊಡುತ್ತಿವೆ. ಭಕ್ತರ ನಂಬಿಕೆಗೆ ಘಾಸಿ ಮಾಡಿರುವ ಜಗನ್ ರೆಡ್ಡಿಗೂ, ಕಾಡತೂಸಿನಲ್ಲಿ ಹಂದಿ ಮತ್ತು ದನದ ಕೊಬ್ಬು ಬಳಸಿದ ಬ್ರಿಟಿಷರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂಬ ಮಾತುಗಳು ಭಕ್ತರಲ್ಲಿಯೇ ಕೇಳಿ ಬರುತ್ತಿವೆ.
ಇದಕ್ಕೆ ಸಾಕ್ಷಿಗಳಿವೆಯಾ ಎಂದರೆ.. ಇಲ್ಲ. ಆದರೆ.. ಈ ಮಾತು ಹೇಳಿರುವುದು ಸಾಮಾನ್ಯ ವ್ಯಕ್ತಿ ಅಲ್ಲ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.