ಕೆಪಿ ಪೂರ್ಣಚಂದ್ರ ತೇಜಸ್ವಿ. ಸಾಹಿತ್ಯ ಲೋಕದ ಧ್ರುವ ತಾರೆ. ಅವರು ಹೇಳುವ ಕಥೆಗಳಷ್ಟೇ ಅಲ್ಲ, ಕಥೆ ಹೇಳುವ ಶೈಲಿ, ನಿರೂಪಣೆಯೇ ವಿಭಿನ್ನ. ಅಂತಹವರ ಕಾದಂಬರಿಗಳಲ್ಲಿ ಒಂದು ಜುಗಾರಿ ಕ್ರಾಸ್. ಈಗ ಸಿನಿಮಾ ಆಗ್ತಾ ಇದೆ. ಅಚ್ಚರಿ ಎನಿಸಬಹುದು, ಇದು ಶಿವಣ್ಣ ಮಾಡಬೇಕಿದ್ದ ಸಿನಿಮಾ. ಶಿವಣ್ಣ ಅವರ ನಿಂತು ಹೋದ ಚಿತ್ರಗಳಲ್ಲಿ ಜುಗಾರಿ ಕ್ರಾಸ್ ಕೂಡಾ ಒಂದು. ತೇಜಸ್ವಿಯವರ ಈ ಕಥೆಯ ಬಗ್ಗೆ ಶಿವಣ್ಣ ಅದೆಷ್ಟು ಥ್ರಿಲ್ ಆಗಿದ್ದರೆಂದರೆ, ಈ ಸಿನಿಮಾಗಾಗಿ ವಿಶೇಷ ತಯಾರಿಯನ್ನೂ ಮಾಡಿಕೊಂಡಿದ್ದರು. ಆದರೆ, ಈ ಚಿತ್ರ ಅದ ಹೇಗೋ ನಿಂತು ನಿಂತೇ ಹೋಗ್ತಿತ್ತು.
ತೇಜಸ್ವಿ, ಕನ್ನಡ ಸಾಹಿತ್ಯ ಲೋಕದ ವಿಶೇಷ ಕಥೆಗಾರ. ಕಾದಂಬರಿಕಾರ. ಫೋಟೋಗ್ರಫಿ, ಕಾಡು, ಕೃಷಿ.. ಹೀಗೆ ಸದಾ ಹೊಸತನದಲ್ಲಿ ತೊಡಗಿಸಿಕೊಳ್ಳುತ್ತಿದ್ದ ತೇಜಸ್ವಿ, ತಂದೆ ಕುವೆಂಪು ಅವರ ಸಾಧನೆಯನ್ನೂ ಮೀರಿ ಬೇರೆಯದೇ ರೀತಿಯಲ್ಲಿ ಓದುಗರನ್ನು ಸೃಷ್ಟಿಸಿಕೊಂಡವರು. ಕನ್ನಡಕ್ಕೆ ಹೊಸ ಹೊಸ ಮಾದರಿಯ ಕಥೆ, ಕಾದಂಬರಿಗಳನ್ನು ಕೊಟ್ಟವರು. ತೇಜಸ್ವಿಯವರ ಕಥೆಗಳನ್ನು ಸಿನಿಮಾ ಮಾಡುವುದು ಸುಲಭದ ಮಾತಲ್ಲ. ಅದರಲ್ಲಿ ಜುಗಾರಿ ಕ್ರಾಸ್ ಎಂಬ ಕಾದಂಬರಿಯನ್ನು ಸಿನಿಮಾ ಮಾಡುವುದಕ್ಕೆ ಹೊರಟಿದ್ದವರು ಯಾರೆಲ್ಲ ಗೊತ್ತೇ..?
ಕೋಡ್ಲು ರಾಮಕೃಷ್ಣ. ಅವರು ಶಿವಣ್ಣ ಅವರನ್ನೇ ಹೀರೋ ಆಗಿ ಆಯ್ಕೆ ಮಾಡಿಕೊಂಡಿದ್ದರು. ನಟಿ ಸೌಂದರ್ಯ ಚಿತ್ರಕ್ಕೆ ಡೇಟ್ ಕೂಡಾ ಕೊಟ್ಟಿದ್ದರು. ಆದರೆ, ಕೋಡ್ಲು ರಾಮಕೃಷ್ಣ ಅವರು ಶಿವಣ್ಣ ಅವರಿಗೇ ವಾರ್ನಿಂಗ್ ಕೊಡೋದ್ರ ಮೂಲಕ ಜುಗಾರಿ ಕ್ರಾಸ್ ಕೈತಪ್ಪಿತ್ತು. ನಿರ್ದೇಶನದ ಬಗ್ಗೆ ಯೋಚನೆಯನ್ನೂ ಮಾಡದ ಶಿವಣ್ಣ, ಜುಗಾರಿ ಕ್ರಾಸ್ ಚಿತ್ರವನ್ನು ತಾವೇ ನಿರ್ದೇಶನ ಮಾಡೋದಾಗಿ ಹೇಳಿಕೆ ಕೊಟ್ಟಿದ್ದರು. ಇದೆಲ್ಲ ಆಗಿದ್ದು 2013ರಲ್ಲಿ.
ಅದಾದ ಮೇಲೆ, ಸೌಂದರ್ಯ ಅವರ ನಿಧನವಾಯಿತು. ಅದೇ ಜುಗಾರಿ ಕ್ರಾಸ್ ಸಿನಿಮಾ ನಾಗಾಭರಣ ಅವರ ಕೈಗೆ ಬಂತು. ಟಿಎಸ್ ನಾಗಾಭರಣ ಅವರು ಚಿತ್ರಕಥೆ ಸಿದ್ಧಮಾಡಿಕೊಂಡಿದ್ದೂ ಆಯ್ತು. ಜನುಮದ ಜೋಡಿ ಹಿಟ್ ಆಯ್ತು. ಜನುಮದಾತ ಫ್ಲಾಪ್ ಆಯ್ತು. ಅದಾದಮೇಲೆ ಅದೇನಾಯ್ತೋ ಏನೋ.. ಮತ್ತೆ ಜುಗಾರಿಕ್ರಾಸ್ ಸದ್ದು ಮಾಡಲೇ ಇಲ್ಲ.
ಈ ಹಿಂದೆ ತೇಜಸ್ವಿ ಅವರ ತಬರನ ಕಥೆ, ಸಿನಿಮಾ ಆಗಿತ್ತು. ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿತ್ತು. ಕುಬಿ ಮತ್ತು ಇಯಾಲ ಚಿತ್ರಗಳೂ ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾದವು. ಆದರೆ ಕಮರ್ಷಿಯಲ್ ಆಗಿ ಸಿನಿಮಾ ಮಾಡಿ ಗೆದ್ದವರು ಕೆಲವರು ಮಾತ್ರ.
ಕಿರಗೂರಿನ ಗಯ್ಯಾಳಿಗಳು ಹಾಗೂ ಡೇರ್ ಡೆವಿಲ್ ಮುಸ್ತಾಫಾ ಚಿತ್ರಗಳು ಕಮರ್ಷಿಯಲ್ ಆಗಿಯೂ ಗೆದ್ದವು. ಆದರೆ, ಈ ಎರಡೂ ಚಿತ್ರಗಳು ತೇಜಸ್ವಿ ಅವರ ಕಥೆ, ಕಾದಂಬರಿ ಓದಿದ್ದವರಿಗೆ ಅಷ್ಟೇನೂ ಹಿಡಿಸಲಿಲ್ಲ ಎನ್ನುವುದೂ ನಿಜ. ಅದು ತೇಜಸ್ವಿಯವರ ಬರಹದ ಶಕ್ತಿಯೂ ಹೌದು.
ಇದೆಲ್ಲದರ ಆಚೆ ತೇಜಸ್ವಿಯವರ ಕೃಷ್ಣೇಗೌಡನ ಆನೆ, ಜುಗಾರಿ ಕ್ರಾಸ್ ಮೊದಲಾದ ಚಿತ್ರಗಳು ಆಗಾಗ್ಗೆ ಸದ್ದು ಮಾಡಿ, ಸುದ್ದಿಯಾಗಿ, ಸದ್ದಿಲ್ಲದೇ ಸುಮ್ಮನಾಗಿವೆ. ಆದರೆ ಇದೀಗ ಗುರುದತ್ ಗಾಣಿಗ ತೇಜಸ್ವಿಯವರ ಜುಗಾರಿ ಕ್ರಾಸ್ ಚಿತ್ರವನ್ನು ಸಿನಿಮಾ ಮಾಡೋ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಕೆಪಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ದೊಡ್ಡದಾದ ಓದುಗರ ಬಳಗವೇ ಇದೆ. ಈ ಹಿಂದೆ ತೇಜಸ್ವಿ ಅವರು ಬದುಕಿದ್ದಾಗ ಹಲವರು ಸಿನಿಮಾ ಮಾಡುವ ಕನಸು ಹೊತ್ತು ಹೋಗಿದ್ದರು. ಆದರೆ ತೇಜಸ್ವಿ, ಇದನ್ನು ಆರ್ಟ್ ಸಿನಿಮಾ ಮಾಡೋದಾದ್ರೆ ಕೊಡೋದಿಲ್ಲ ಎಂದಿದ್ದರು. ಮಾಡಿದರೆ ಜನ ನೋಡುವಂತೆ ಕಮರ್ಷಿಯಲ್ ಆಗಿ ಮಾಡಿ ಎಂದಿದ್ದರು. ಗುರುದತ್ ಗಾಣಿಗ ಅವರ ಮೇಲೆ ಈ ಜವಾಬ್ದಾರಿಯೂ ಇದೆ.
ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಘೋಷಣೆ ಮಾಡಿದ್ದು, ಫಸ್ಟ್ ಲುಕ್ ಪೋಸ್ಟರ್ ವ್ಹಾವ್ ಎನ್ನುವಂತಿದೆ. ರೈಲು, ಕೆಂಪು ಹವಳ ಮತ್ತು ಆ ಹಳೆಯ ಮ್ಯಾಪ್ನ ಚಿತ್ರವಿದೆ. ಜುಗಾರಿ ಕ್ರಾಸ್ ಕತೆ ಓದಿರುವವರಿಗೆ ಈ ಮೂರು ವಿಷಯಗಳ ಪ್ರಾಧಾನ್ಯತೆ ಅರ್ಥವಾಗುತ್ತದೆ. ಜುಗಾರಿ ಕ್ರಾಸ್ ನಲ್ಲಿ ಬರುವ ಪಾತ್ರಗಳಿಗೆ ಯಾರೆಲ್ಲ ಜೀವ ತುಂಬಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸುಪ್ರಸಿದ್ಧ ಕಾದಂಬರಿಯನ್ನು ತೆರೆ ಮೇಲೆ ತರುವುದೆ ಅತೀ ದೊಡ್ಡ ಜವಾಬ್ದಾರಿ.
ಗುರುದತ್ ಗಾಣಿಗ ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಕಿಚ್ಚ ಸುದೀಪ್ ಅವರ ಗರಡಿಯಲ್ಲಿ ಬೆಳೆದ ಹುಡುಗ ಗುರುದತ್ ಗಾಣಿಕ. ಆದರೆ, ಅಂಬಿ ನಿಂಗ್ ವಯಸ್ಸಾಯ್ತೋ.. ರೀಮೇಕ್ ಆಗಿತ್ತು. ಕರಾವಳಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟೀಸರ್, ಮೇಕಿಂಗ್ ಅದ್ಭುತ ಎನ್ನಿಸುವಂತಿದೆ. ಕರಾವಳಿ ಚಿತ್ರ ಮುಗಿಯುವ ಹೊತ್ತಿಗೆ ಜುಗಾರಿ ಕ್ರಾಸ್ ಸೆಟ್ಟೇರಬಹುದು.
ಆದರೆ, ಈ ಚಿತ್ರದಲ್ಲಿ ಹೀರೋ ಆಗಿ ಶಿವಣ್ಣ ಅವರೇ ಇರ್ತಾರಾ..? ಏಕೆಂದರೆ ಇಬ್ಬಿಬ್ಬರು ನಿರ್ದೇಶಕರ ಕೈತಪ್ಪಿ ಬಂದಿರುವ ಚಿತ್ರವಿದು. ಕಾದು ನೋಡೋಣ.