ಕಾಮಾಕ್ಯ ಶಕ್ತಿಪೀಠ. ಸದ್ಯಕ್ಕೆ ಕರ್ನಾಟಕದಲ್ಲಿ ಈ ಶಕ್ತಿಪೀಠದ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ಕುತೂಹಲ ಮೂಡುತ್ತಿದೆ. ಇಷ್ಟಕ್ಕೂ ಈ ಶಕ್ತಿಪೀಠದ ಬಗ್ಗೆ ಕುತೂಹಲ ಮೂಡುವುದಕ್ಕೆ ಕಾರಣ, ಈ ದೇವಸ್ಥಾನಕ್ಕೆ ವಿಜಯಲಕ್ಷ್ಮಿ ದರ್ಶನ್ ಭೇಟಿ ನೀಡಿ ಪೂಜೆ ಮಾಡಿಸಿದ್ದು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಂ.2 ಆರೋಪಿಯಾಗಿರುವ ನಟ ದರ್ಶನ್ ಅವರಿಗಾಗಿ ಪತ್ನಿ ವಿಜಯಲಕ್ಷ್ಮಿ ಈಗ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿರುವ ಶಕ್ತಿಪೀಠ ಕಾಮಾಕ್ಯ ದೇವಿ ದೇವಾಲಯ ಭಾರತದ ಪುರಾತನ ಶಕ್ತಿಪೀಠಗಳಲ್ಲಿ ಒಂದು. ದೇಶದ 51 ಶಕ್ತಿಪೀಠಗಳಲ್ಲಿ ಗುವಾಹಟಿ ಕಾಮಾಕ್ಯಾ ದೇವಾಲವೇ ಕಾರ್ಣಿಕದ ಕ್ಷೇತ್ರ. ಗುವಾಹಟಿ ನಗರದ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ಕಾಮಾಕ್ಯ ದೇವಿಯ ದೇವಸ್ಥಾನವಿದೆ.
ದೇವಿಯ ವಿಗ್ರಹಕ್ಕಲ್ಲ.. ಯೋನಿಗೆ ಪೂಜೆ :
ಇಲ್ಲಿ ಪೂಜಿಸಲ್ಪಡುವುದು ದೇವಿಯ ವಿಗ್ರಹವಿಲ್ಲ. ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತದೆ. ಇಲ್ಲಿನ ದೇವಸ್ಥಾನಕ್ಕೆ ಮೂರು ಪ್ರಾಂಗಣಗಳಿವೆ. ಒಂದು ಕಡೆ ಯೋನಿಯ ಆಕಾರದ ನೈಸರ್ಗಿಕ ಚಿಲುಮೆ ಇದ್ದು, ಅಲ್ಲಿಂದ ನೀರು ಹರಿಯುತ್ತದೆ. ಕಾಳಿಕಾ ಪುರಾಣದ ಪ್ರಕಾರ ಶಿವ ಮತ್ತು ಸತಿಯರ ಸಂಗಮದ ಸ್ಥಳವಾಗಿತ್ತು. ದಕ್ಷ ಯಜ್ಞದಲ್ಲಿ ಸತಿಯ ಪ್ರಾಣಾರ್ಪಣೆಯ ನಂತರ ಸತಿಯ ಶವ ಅಥವಾ ಕಳೇಬರದ ಜೊತೆ ಶಿವ ತಾಂಡವ ನೃತ್ಯ ಮಾಡಿದ.ಆಗ ಸತಿಯ ಯೋನಿ ಬಿದ್ದ ಸ್ಥಳವೇ ಕಾಮಾಕ್ಯ.
ಇಲ್ಲಿ ದೇವಿಯ ಅಹೋಮ್ ರಾಜಮನೆತನಕ್ಕೆ ಶಾಪ ನೀಡಿದ್ದಳೆಂಬ ನಂಬಿಕೆ ಇದೆ. ಈಶಾನ್ಯ ಭಾರತವನ್ನು ಸುದೀರ್ಘ ಕಾಲ ಆಳ್ವಿಕೆ ಮಾಡಿದ, ಮೊಘಲರ ಕ್ರೌರ್ಯವನ್ನು ಮೆಟ್ಟಿನಿಂತಿದ್ದ ಅಹೋಮ್ ರಾಜವಂಶಸ್ಥರು, ಈ ದೇವಾಲಯವನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಅದು ದೇವಿಯ ಶಾಪ ಎಂಬ ನಂಬಿಕೆ ಇದೆ.
ಭಕ್ತರಿಗೆ ರಕ್ತದ ಬಟ್ಟೆಯೇ ಪ್ರಸಾದ :
ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅಂಬುಬಾಜಿ ಮೇಳ ನಡೆಯುತ್ತದೆ. ಆಗ, ದೇವಿ ಮುಟ್ಟಾಗುತ್ತಾಳೆ ಎನ್ನುವುದು ನಂಬಿಕೆ. ಅದೇ ಕಾರಣಕ್ಕೆ ಹತ್ತಿರದಲ್ಲಿ ಹರಿವ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಮುಟ್ಟಾದ ಮೂರು ದಿನಗಳ ಕಾಲ ಈ ದೇವಾಲಯವನ್ನು ಬಂದ್ ಮಾಡಲಾಗುತ್ತದೆ. ಇಲ್ಲಿ ಭಕ್ತರಿಗೆ ಕೆಂಪು ಬಣ್ಣದ ಬಟ್ಟೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ದೇವಿ ಮುಟ್ಟಾದಾಗ ದೇವಾಲಯದಲ್ಲಿ ಬಿಳಿ ಬಟ್ಟೆಗಳನ್ನು ಹರಡಿ ದೇವಾಲಯವನ್ನು ಮೂರು ದಿನಗಳವರೆಗೆ ಮುಚ್ಚುತ್ತಾರೆ. ಮೂರು ದಿನಗಳ ನಂತರ ದೇವಾಲಯದ ಬಾಗಿಲು ತೆರೆದಾಗ, ಬಿಳಿ ಬಟ್ಟೆಯು ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಆ ಬಟ್ಟೆಯನ್ನ ಅಂಬುವಾಚಿ ಬಟ್ಟೆ ಎಂದು ಕರೆಯುತ್ತಾರೆ. ಆ ಬಟ್ಟೆಯನ್ನೇ ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರೆ.
ಕಲ್ಲಿನ ಕುಂಕುಮ :
ಇಲ್ಲಿ ಕಲ್ಲಿನಿಂದ ಕುಂಕುಮ ತಯಾರಿಸಲಾಗುತ್ತದೆ. ಅದನ್ನು ಕಾಮಾಕ್ಯ ಸಿಂಧೂರ್ ಎಂದೇ ಕರೆಯುತ್ತಾರೆ. ಮಕ್ಕಳಾಗದವರಿಗೆ ಈ ಕುಂಕುಮ ಇಟ್ಟುಕೊಂಡರೆ ಮಕ್ಕಳಾಗುತ್ತವೆ ಎನ್ನುವುದು ನಂಬಿಕೆ.
ಅಘೋರಿಗಳ ತಂತ್ರ ಪೂಜೆಯ ಸ್ಥಾನ :
ಇದು ಅಘೋರಿಗಳ ಇಷ್ಟದ ತಾಣವೂ ಹೌದು. ಇಲ್ಲಿ ಅಘೋರಿಗಳ ತಂತ್ರ ಮಂತ್ರ ಪೂಜೆಗಳೂ ನಡೆಯುತ್ತವೆ. ದೇವತೆಯನ್ನು ವಾಮಾಚಾರ (ಎಡಗೈ-ವಿಧಾನ) ಜೊತೆಗೆ ದಕ್ಷಿಣಾಚಾರ (ಬಲಗೈ-ವಿಧಾನ) ಹೀಗ ಎರಡೂ ಪೂಜಾ ಪದ್ಧತಿಗಳ ಪ್ರಕಾರವಾಗಿ ಪೂಜಿಸಲಾಗುತ್ತದೆ . ಇಲ್ಲಿ ಪ್ರಾಣಿ ಬಲಿ ಸಾಮಾನ್ಯ. ಆದರೆ ಬಲಿ ಕೊಡುವಾಗಲೂ ಕೂಡಾ ಹೆಣ್ಣಾಗಿದ್ದರೆ ಬಲಿ ಕೊಡುವುದಿಲ್ಲ.
ಇನ್ನು ವಿಜಯಲಕ್ಷ್ಮಿ ದರ್ಶನ್ ಅವರಿಗಾಗಿ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಜಯಲಕ್ಷ್ಮಿ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ನವಚಂಡಿಕಾ ಹೋಮ ಹಾಗೂ ಯಾಗ ನಡೆಸಿದ್ದರು. ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ಭೀಮನ ಅಮಾವಾಸ್ಯೆ ದಿನ ಬನಶಂಕರಿ ದೇವಸ್ಥಾನದಲ್ಲೂ ಪೂಜೆ ಮಾಡಿಸಿದ್ದರು. ಗುರು ರಾಘವೇಂದ್ರರ ಸನ್ನಿಧಿಯಲ್ಲಿಯೂ ಪೂಜೆ ಮಾಡಿಸಿದ್ದರು. ಇದರ ನಡುವೆಯೇ ಭಾರತದ ಅತ್ಯಂತ ಪುರಾತನ ಶಕ್ತಿಪೀಠ ಕಾಮಾಕ್ಯ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ನಟ ಜಗ್ಗೇಶ್ , ನಟಿಯರಾದ ಕಾವ್ಯ ಶಾಸ್ತ್ರಿ, ಕಾವ್ಯಾ ಶೆಟ್ಟಿ, ರಾಗಿಣಿ ದ್ವಿವೇದಿ ಮತ್ತು ಇತ್ತೀಚೆಗೆ ನಿಶ್ವಿಕಾ ನಾಯ್ಡು ಕೂಡ ಭೇಟಿ ನೀಡಿದ್ದರು. ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ , ಕಂಗನಾ ರಣಾವತ್, ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ಊರ್ವಶಿ ರೌಟೇಲಾ , ತಮನ್ನಾ ಭಾಟಿಯಾ, ಸಂಯುಕ್ತಾ ಮೆನನ್ ಸೇರಿದಂತೆ ಅನೇಕ ತಾರೆಯರು ಇಲ್ಲಿಗೆ ಭೇಟಿ ನೀಡಿದ್ದಾರೆ.