ರಿಯಲ್ ಸ್ಟಾರ್ ಎಂದೇ ಕರೆಸಿಕೊಂಡಿರುವ ಉಪೇಂದ್ರ ಅವರೀಗ ಹುಟ್ಟುಹಬ್ಬದ ಜೋಷ್ʻನಲ್ಲಿದ್ದಾರೆ. ಉಪೇಂದ್ರ ಅವರದ್ದು ಒಂದು ವಿಶೇಷತೆ ಎಂದರೆ.. ಅವರು ಹೇಳಿದ್ದು ಅವರಿಗೆ ಮಾತ್ರ ಅರ್ಥವಾಗುತ್ತದೆ. ಹಾಗಂತ ಅರ್ಥವಾಗುವುದೇ ಇಲ್ಲ ಎಂದು ಹೇಳೋಕಾಗಲ್ಲ. ಆದರೆ, ಈಗ ಹೇಳಿದ್ದರ ಅರ್ಥ ಬೇರೆಯದೇ ಇದ್ದರೆ, ಇನ್ನೊಂದು ಸ್ವಲ್ಪ ಹೊತ್ತಿನ ನಂತರ ಅದೇ ಅರ್ಥ ಬೇರೆಯ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಇಂತಹ ಉಪೇಂದ್ರ ಚಿತ್ರರಂಗಕ್ಕೆ ಕೊಟ್ಟಿರುವ ಹಲವು ಕೊಡುಗೆಗಳಲ್ಲಿ ಪ್ರತಿಭೆಗಳೂ ಇವೆ. ಕೆಲವು ಪ್ರತಿಭೆಗಳಿಗೆ ಹೊಸ ಇಮೇಜ್ ಕೊಟ್ಟಿದ್ಧಾರೆ. ಗೇಮ್ ಚೇಂಜ್ ಮಾಡಿದ್ದಾರೆ.
ಅಂತಹವುಗಳ ಒಟ್ಟಾರೆ ಪಟ್ಟಿ ನೋಡೋದಾದ್ರೆ..
ಜಗ್ಗೇಶ್ ಮತ್ತು ಡಗಾರ್ : ಜಗ್ಗೇಶ್ ಅವರನ್ನು ಚಿತ್ರರಂಗಕ್ಕೆ ಕರೆತಂದವರು ಉಪೇಂದ್ರ ಅಲ್ಲ. ಆದರೆ, ತರ್ಲೆ ನನ್ಮಗ ಚಿತ್ರದ ಮೂಲಕ ಹೀರೋ ಮಾಡಿದ್ದು ಇದೇ ಉಪೇಂದ್ರ. ೧೯೯೨ರಲ್ಲಿ. ಇನ್ನು ಡಗಾರ್.. ಪದದ ಸೃಷ್ಟಿಕರ್ತ ಕೂಡಾ ಉಪೇಂದ್ರ ಅವರೇ.
ಕುಮಾರ್ ಗೋವಿಂದ್ : ಶ್ ಚಿತ್ರದ ಮೂಲಕ ನಟ ಕುಮಾರ್ ಗೋವಿಂದ್ ಅವರನ್ನು ಹೀರೋ ಮಾಡಿದ್ದು ಉಪೇಂದ್ರ. ಕುಮಾರ್ ಗೋವಿಂದ್ ಅವರ ವೃತ್ತಿ ಜೀವನದಲ್ಲಿ ಇರುವುದು ಎರಡೇ ಹಿಟ್ ಸಿನಿಮಾಗಳು. ಒಂದು ಶ್. ಮತ್ತೊಂದು ಅನುರಾಗ ಸಂಗಮ.
ಸಾಧು ಕೋಕಿಲ : ಸಾಧು ಕೋಕಿಲ ಅವರನ್ನು ಸಂಗೀತ ನಿರ್ದೇಶಕರಾಗಿ, ನಟರಾಗಿ ಚಿತ್ರರಂಗಕ್ಕೆ ತಂದವರು ಇದೇ ಉಪೇಂದ್ರ. ಸಾಧು ಅವರ ಮೂಲ ಹೆಸರು ಸತ್ಯ ಶೀಲನ್ ಶಾದ್ರಾ. ಅವರಿಗೆ ಸಾಧು ಕೋಕಿಲ ಎಂದು ನಾಮಕರಣ ಮಾಡಿದ್ದು ಇದೇ ಉಪೇಂದ್ರ. ಹಾಸ್ಯ ನಟನಾಗಿ, ನಿರ್ದೇಶಕನಾಗಿ, ಸಂಗೀತ ನಿರ್ದೇಶಕ, ಹಾಡುಗಾರನಾಗಿಯೂ ಗೆದ್ದಿರುವ ಸಾಧು ಕೋಕಿಲ, ಕನ್ನಡ ಚಿತ್ರರಂಗಕ್ಕೆ ಉಪೇಂದ್ರ ಕೊಟ್ಟ ಪ್ರತಿಭೆ.
ಗುರು ಕಿರಣ್ : ಸಂಗೀತ ನಿರ್ದೇಶನದಲ್ಲಿ ಒಂದು ಕಾಲದಲ್ಲಿ ಸಂಚಲನವನ್ನೇ ಸೃಷ್ಟಿಸಿದ ಗುರುಕಿರಣ್ ಅವರನ್ನು ಎ ಚಿತ್ರದ ಮೂಲಕ ಚಿತ್ರರಂಗಕ್ಕೆ ಕರೆತಂದವರು ರಿಯಲ್ ಸ್ಟಾರ್ ಉಪೇಂದ್ರ. ನಂತರ ಗುರು ಕಿರಣ್ ಚಿತ್ರರಂಗದವನ್ನು ದಶಕಗಳ ಕಾಲ ಆಳ್ವಿಕೆ ಮಾಡಿದರು.
ದಾಮಿನಿ : ನಟಿ ದಾಮಿನಿ ಅವರನ್ನು ಉಪೇಂದ್ರ ಚಿತ್ರದ ಮೂಲಕ ಕರೆತಂದವರು ಇದೇ ಉಪೇಂದ್ರ.
ಪ್ರಿಯಾಂಕಾ ಉಪೇಂದ್ರ : ಪ್ರಿಯಾಂಕಾ ಮೊದಲಿಗೆ ಕನ್ನಡಕ್ಕೆ ನಾಯಕಿಯಾಗಿ ಬಂದಿದ್ದು ಉಪೇಂದ್ರ ಅವರ ಅಭಿನಯದ ಹೆಚ್೨ಒ ಚಿತ್ರದ ಮೂಲಕ. ಮುಂದೆ ಪ್ರಿಯಾಂಕಾ, ಸ್ಟಾರ್ ನಾಯಕಿಯಾಗಿದ್ದಷ್ಟೇ ಅಲ್ಲ, ಉಪೇಂದ್ರ ಅವರ ಮನೆಯ ಹೃದಯದ ಯಜಮಾನಿಯಾದರು.
ಒಂದಕ್ಷರದ, ಚಿಹ್ನೆಗಳ ಟೈಟಲ್ ಟ್ರೆಂಡ್ : ಉಪೇಂದ್ರ ನಿರ್ದೇಶನದ ಚಿತ್ರಗಳಲ್ಲಿ ತರ್ಲೆ ನನ್ಮಗ, ಆಪರೇಷನ್ ಅಂತ ಬಿಟ್ಟರೆ, ಮಿಕ್ಕೆಲ್ಲ ಚಿತ್ರಗಳಲ್ಲಿ ಒಂದಕ್ಷರ ಅಥವಾ ಚಿಹ್ನೆಗಳಿರುತ್ತವೆ. ಟೈಟಲ್ ಅರ್ಥವಾಗಲ್ಲ. ಶ್, ಓಂ, ಸ್ವಸ್ತಿಕ್, ಎ, ಉಪೇಂದ್ರ, ಉಪ್ಪಿ ೨, ಸೂಪರ್.. ಈಗ ಯುಐ..
ಇನ್ನು ನಟಿ ಪ್ರೇಮಾ ಅವರಿಗೆ ಹೊಸ ಇಮೇಜ್ ಕೊಟ್ಟವರು ಇದೇ ಉಪೇಂದ್ರ. ಪ್ರೇಮಾ ʻಸವ್ಯಸಾಚಿʼ ಚಿತ್ರದಲ್ಲಿ ಶಿವಣ್ಣ ಎದುರೇ ಮೊದಲು ನಾಯಕಿಯಾಗಿದ್ದರೂ, ಎಷ್ಟೋ ಜನರಿಗೆ ಆ ಚಿತ್ರದ ನೆನಪೇ ಇಲ್ಲ.
ಇನ್ನು ಶಿವ ರಾಜ್ ಕುಮಾರ್ ಕೈಗೆ ಲಾಂಗು ಕೊಟ್ಟು ಇಮೇಜ್ ಬದಲಿಸಿದ ಖ್ಯಾತಿಯೂ ಉಪೇಂದ್ರ ಅವರದ್ದೇ. ಅದೂವರೆಗೆ ಲವರ್ ಬಾಯ್ ಹಾಗೂ ಫ್ಯಾಮಿಲಿ ಹೀರೋ ಆಗಿದ್ದ ಶಿವಣ್ಣ, ಓಂ ಚಿತ್ರದ ನಂತರ ರೌಡಿ ಹೀರೋ ಆದರು.
ಎ ಚಿತ್ರದ ಮೂಲಕ ಪೋಸ್ಟರ್ ಡಿಸೈನ್, ನಿರೂಪಣೆಯ ಶೈಲಿಯನ್ನೂ ಬದಲಿಸಿದ ಉಪೇಂದ್ರ, ತಮ್ಮದೇ ನಿರ್ದೇಶನದ ಚಿತ್ರಕ್ಕೆ ತಾವೇ ಹೀರೋ ಆದರು. ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನ್ ಆಗಿನ ಕಾಲಕ್ಕೆ ಸೆನ್ಸೇಷನ್ ಆಗಿತ್ತು.
ಅದಾದ ಮೇಲೆ ತಮ್ಮದೇ ಹೆಸರಿನ ಉಪೇಂದ್ರ ಚಿತ್ರವನ್ನು ಮಾಡಿದರು. ಸೈಕಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರಿಗೆ ವಿಭಿನ್ನವಾಗಿ ತೋರಿಸಿ ಗೆದ್ದರು.
ಇನ್ನು ನಟಿ ರವೀನಾ ಟಂಡನ್, ನಯನತಾರಾ ಅವರನ್ನು ಕನ್ನಡಕ್ಕೆ ಕರೆತಂದ ಖ್ಯಾತಿಯೂ ಉಪೇಂದ್ರ ಅವರದ್ದೇ.
ರೋಬೋಗಳು ಮಾನವನ ಜಗತ್ತು ಬದಲಿಸಲಿವೆ ಎಂಬ ಕಲ್ಪನೆಯಲ್ಲಿ ಮೂಡಿ ಬಂದ ಹಾಲಿವುಡ್, ಹಲವು ಚಿತ್ರಗಳಿಗೆ ಮುನ್ನುಡಿಯಾಯ್ತು.
ರಾಘವೇಂದ್ರ ರಾಜ್ ಕುಮಾರ್ ಅವರನ್ನು ರಗಡ್ ಲುಕ್ಕಿನಲ್ಲಿ ತೋರಿಸಿದವರೂ ಕೂಡಾ ಉಪೇಂದ್ರ ಅವರೇ. ಸ್ವಸ್ತಿಕ್ ಚಿತ್ರದಲ್ಲಿ.
ನಟರಾಗಿ, ನಿರ್ದೇಶಕರಾಗಿ ಉಪೇಂದ್ರ ಮಾಡಿದ ಕ್ರಾಂತಿಗಳಿಗೆ ಲೆಕ್ಕವೇ ಇಲ್ಲ.