ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸೆಷನ್ಸ್ ಕೋರ್ಟಿನಲ್ಲಿ ಜಾಮೀನು ಸಿಕ್ಕಿಲ್ಲ. ಜೈಲು ಸೇರಿ ನಾಲ್ಕು ತಿಂಗಳೇ ಕಳೆದು ಹೋಗಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಬಂದಿದ್ದೂ ಆಗಿದೆ. ಚಾರ್ಜ್ ಶೀಟ್ ಫೈಲ್ ಆಗಿದೆ. ಆದರೆ ಜಾಮೀನು ಸಿಕ್ಕಿಲ್ಲ. ಪವಿತ್ರಾ ಗೌಡ ಅವರ ಜೊತೆ ಸಂಬಂಧದಲ್ಲಿ ದರ್ಶನ್ ಅವರಿಗೆ ಏನು ಸಿಕ್ಕಿತೋ.. ಬಿಟ್ಟಿತೋ.. ಜೈಲು ಭಾಗ್ಯವಂತೂ ಸಿಕ್ಕಿದೆ. ನಾಲ್ಕು ತಿಂಗಳಿಂದ ಜೈಲಲ್ಲೇ ಇರುವ ದರ್ಶನ್ ಅವರಿಗೆ ಅತ್ತ ಜಾಮೀನೂ ಸಿಕ್ಕಿಲ್ಲ. ಇತ್ತ ಆರೋಗ್ಯವೂ ಇಲ್ಲ. ಜೈಲಿಂದ ಜೈಲಿಗೆ ಶಿಫ್ಟ್ ಆಗಿ, ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರನ್ನು ಕಾಡುತ್ತಿರೋದು ಬೆನ್ನು ನೋವು. ಇದರ ನಡುವೆಯೇ ದರ್ಶನ್ ಅವರನ್ನು ಕಾಡುತ್ತಿರುವ ಬೆನ್ನುನೋವು, ದರ್ಶನ್ ಅವರಿಗೆ ಜಾಮೀನು ಸಿಗುವಂತೆ ಮಾಡುತ್ತಾ..? ಇದೊಂದು ಕುತೂಹಲ ಅಷ್ಟೇ.
ತೀವ್ರ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದ ದರ್ಶನ್ಗೆ ಫಿಜಿಯೋ ಥೆರಪಿ ಚಿಕಿತ್ಸೆ ಕೊಡಿಸಲಾಗಿದೆ. ಅದೊಂದೇ ಸದ್ಯಕ್ಕೆ ಸಿಕ್ಕಿರುವ ರಿಲ್ಯಾಕ್ಸ್. ಬಳ್ಳಾರಿ ಜೈಲಿನಲ್ಲಿಯೇ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಫಿಜಿಯೋಥೆರೆಪಿ ಚಿಕಿತ್ಸೆ ಕೊಡಲಾಗುತ್ತಿದೆ. ದರ್ಶನ್ ಪರ ವಕೀಲರು ಜಾಮೀನಿನ ಮೊರೆ ಹೋಗಿವುದು ಇದೇ ಬೆನ್ನುಹುರಿ ನೋವಿನ ಕಾರಣ ಕೊಟ್ಟು.
ಜೈಲಿನ ಹೈ ಸೆಕ್ಯೂರಿಟಿ ಸೆಲ್ನಲ್ಲೇ ವಿಮ್ಸ್ ವೈದ್ಯರು ಒಂದು ಗಂಟೆ ಫಿಜಿಯೋಥೆರೆಪಿ ಮಾಡಿದ್ದಾರೆ. ಇದರಿಂದ ದರ್ಶನ್ ಕೊಂಚ ರಿಲೀಫ್ ಆಗಿದ್ದಾರೆ. ದರ್ಶನ್ ಬೆನ್ನಿನ ಭಾಗದಲ್ಲಿ ಊತ ಕಾಣಿಸಿಕೊಂಡಿತ್ತು. ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ದರ್ಶನ್ ಅವರನ್ನು ಸ್ಕ್ಯಾನಿಂಗ್ ಮಾಡಿದ್ದರು. ಸರ್ಜರಿ ಹಾಗೂ ಫಿಜಿಯೋಥೆರಪಿಗೆ ಸಲಹೆ ನೀಡಿದ್ದರು. ಸದ್ಯ ಸರ್ಜರಿಯನ್ನು ಬೆಂಗಳೂರಿಗೆ ಹೋಗಿ ಮಾಡಿಸುವುದಾಗಿ ಹೇಳುತ್ತಿರುವ ದರ್ಶನ್, ಅವರಿಗೆ ಫಿಜಿಯೋಥೆರೆಪಿ ಆರಂಭಿಸಲಾಗಿದೆ. ವೈದ್ಯರ ಸೂಚನೆ ಮೇರೆಗೆ ಮೆಡಿಕಲ್ ಬೆಡ್, ದಿಂಬು ಹಾಗೂ ಚೇರ್ಗಳನ್ನು ಕೊಡಲಾಗಿದೆ. ಆದರೆ ಆಪರೇಷನ್ ಆಗತ್ಯ ಇದೆ ಎನ್ನಲಾಗಿದ್ದು, ಅದರ ಆಧಾರದಲ್ಲೇ ಜಾಮೀನಿಗೆ ಕೇಳಲಾಗಿದೆ.
ದರ್ಶನ್ ಅವರಿಗೆ ಕೆಳ ಹಂತದ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಹೈಕೋರ್ಟಿಗೆ ಮೇಲ್ಮನವಿ ಹೋಗಲಾಗಿದೆ. ದರ್ಶನ್ ಅನಾರೋಗ್ಯ ಸ್ಥಿತಿ ಗಮನಿಸಿ ಬೇಗ ಅರ್ಜಿ ವಿಚಾರಣೆ ನಡೆಸಬೇಕು ಎಂದು ಮನವಿ ಸಲ್ಲಿಸಿದ್ದು, ಹೈಕೋರ್ಟ್ ಕೂಡಾ ಮನವಿಯನ್ನು ಪುರಸ್ಕರಿಸಿದೆ. ಇದೇ ಅಕ್ಟೋಬರ್ 22ನೇ ತಾರೀಖು ಹೈಕೋರ್ಟ್ನಲ್ಲಿ ದರ್ಶನ್ ಬೇಲ್ ಅರ್ಜಿಯ ವಿಚಾರಣೆ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಹೆಚ್ಚಿನ ತನಿಖೆ ಅಗತ್ಯ ಇಲ್ಲ. ಹಾಗೆಯೇ, ತಾನು ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಬೇಕು ಅಂತ ದರ್ಶನ್ ಕೋರಿಕೊಂಡಿದ್ದಾರೆ.
ಈ ವಿಷಯದಲ್ಲಿ ನ್ಯಾಯಾಲಯ ರಿಲೀಫ್ ಕೊಡುವ ಸಾಧ್ಯತೆಯೂ ಇರುತ್ತದೆ. ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಮಾಡಿಸಿ ಎಂದು ಸರ್ಕಾರಕ್ಕೆ ಸೂಚನೆ ನೀಡುವ ಸಾಧ್ಯತೆಯೂ ಇರುತ್ತದೆ. ದರ್ಶನ್ ಅವರಿಗೆ ಚಿಕಿತ್ಸೆ ಸಿಗಬಹುದು, ಅದರಲ್ಲಿ ಅನುಮಾನ ಇಲ್ಲ. ಆದರೆ ಜಾಮೀನು ನೀಡುವುದು ಅಥವಾ ನಿರಾಕರಿಸುವುದು ಕೋರ್ಟಿಗೆ ಬಿಟ್ಟ ವಿಷಯ.