ವಿಜಯೇಂದ್ರ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ತುಂಬಾ ದಿನಗಳೇನೂ ಆಗಿಲ್ಲ. ಆದರೆ, ಅಧ್ಯಕ್ಷರಾದ ದಿನದಿಂದಲೂ ವಿಜಯೇಂದ್ರ ವಿರುದ್ಧ ಒಂದು ಸೈನ್ಯವೇ ತಯಾರಾಗಿ ನಿಂತಿದೆ. ಆ ಸೈನ್ಯದ ನೇತೃತ್ವ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದು. ಅವರ ಜೊತೆಯಲ್ಲಿ ಸಿಟಿ ರವಿ, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಜಿಎಂ ಸಿದ್ಧೇಶ್ವರ ಮೊದಲಾದವರೆಲ್ಲ ಇದ್ದಾರೆ.
ಇವರಲ್ಲಿ ಒಬ್ಬೊಬ್ಬರೂ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದರು. ಯತ್ನಾಳ್ ಅವರಂತೂ ದಿನಕ್ಕೆರಡು ಬಾರಿ ನೇರಾನೇರ ತಿವಿಯುತ್ತಿದ್ದರು. ವಿಜಯೇಂದ್ರ ಮತ್ತು ಯಡಿಯೂರಪ್ಪ ಇಬ್ಬರನ್ನೂ ಝಾಡಿಸುತ್ತಿದ್ದರು. ಇನ್ನುಳಿದಂತೆ ಪ್ರತಾಪ್ ಸಿಂಹ ಒಂದ್ಸಲ ಅವರ ಪರ, ಒಂದ್ಸಲ ಯಾರಿಗೂ ನೋವಾಗದಂತೆ ಹೇಳಿಕೆ ಕೊಡುತ್ತಿದ್ದರು. ಸಿಟಿ ರವಿ ಅವರ ಉತ್ತರಗಳಲ್ಲಿ ಮರ್ಮವನ್ನು ಜನರೇ ಹುಡುಕಬೇಕಿತ್ತು. ಇನ್ನು ಕುಮಾರ್ ಬಂಗಾರಪ್ಪ ರಮೇಶ್ ಜಾರಕಿಹೊಳಿ.. ಹಂಗಲ್ಲ ಹಿಂಗೆ ಎನ್ನುತ್ತಿದ್ದರೇ ಹೊರತು, ವಿಜಯೇಂದ್ರ ಅವರ ಜೊತೆ ಇದ್ದೇವೆ ಎಂದವರಲ್ಲ. ಜಿಎಂ ಸಿದ್ದೇಶ್ವರ್, ಅರವಿಂದ ಲಿಂಬಾವಳಿ, ಬಿಪಿ ಹರೀಶ್ ಅವರ ನೋವು ಬೇರೆಯದೇ ತೆರನಾದದ್ದು.
ಆದರೆ ಇದ್ದಕ್ಕಿದ್ದಂತೆ ಎಲ್ಲರೂ ಸೈಲೆಂಟ್ ಆಗಿ ಹೋಗಿದ್ದಾರೆ. ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಏನೊಂದು ಮಾತನಾಡುತ್ತಿಲ್ಲ. ಯತ್ನಾಳ್ ಅವರಷ್ಟೇ ಅಲ್ಲ, ಅವರ ಜೊತೆಯಲ್ಲಿರುವ ಯಾರೊಬ್ಬರೂ ಮಾತನಾಡುತ್ತಿಲ್ಲ. ಹಾಗಾದರೆ, ಹೈಕಮಾಂಡ್ ಬಿಸಿ ಮುಟ್ಟಿಸಿತಾ..? ಮಾತನಾಡಿದ್ರೆ ಹುಷಾರ್ ಎಂದು ಹೇಳಿತಾ..? ಎಂದು ನೋಡಿದರೆ ಹಾಗೇನೂ ಹೇಳಿಲ್ಲ.
ಮೂಲಗಳ ಪ್ರಕಾರ ವಿಜಯೇಂದ್ರ ಅವರನ್ನು ಯತ್ನಾಳ್ ಮತ್ತವರ ಜೊತೆ ಮಾತನಾಡಿ ಎಂದಿದೆ. ಅದಕ್ಕೆ ವಿಜಯೇಂದ್ರ, ಆರಂಭದ ದಿನಗಳಲ್ಲಿ ಪ್ರಯತ್ನ ಮಾಡಿದ್ದನ್ನು, ಅದಾದ ನಂತರವೂ ಅವರು ವಾಗ್ದಾಳಿ ನಡೆಸುತ್ತಲೇ ಇರುವುದನ್ನು ವಿವರಿಸಿದ್ದಾರೆ. ಯತ್ನಾಳ್ ಅವರನ್ನು ಪಕ್ಷದಿಂದ ಆಚೆ ಹಾಕಿ. ಅವರಿಂದ ತಮ್ಮ ವೈಯಕ್ತಿಕ ವರ್ಚಸ್ಸಿಗಷ್ಟೇ ಅಲ್ಲ, ಪಕ್ಷಕ್ಕೂ ಡ್ಯಾಮೇಜ್ ಎಂದು ವಿವರಿಸಿದ್ದಾರೆ. ಇದೆಲ್ಲ ಆದ ಮೇಲೆ ಹೈಕಮಾಂಡ್ ಯತ್ನಾಳ್ ಅವರನ್ನು ಕರೆಸಿ ಮಾತನಾಡಿದೆ.
ಯತ್ನಾಳ್ ಅವರು ಹೈಕಮಾಂಡ್ ಎದುರು ಯಡಿಯೂರಪ್ಪ, ವಿಜಯೇಂದ್ರ ಮತ್ತು ಆರ್.ಅಶೋಕ್ ವಿರುದ್ಧ ಮಾತನಾಡಿದ್ದಾರೆ. ಇವರ ಮೇಲೆಲ್ಲ ಭ್ರಷ್ಟಾಚಾರದ ಕೇಸುಗಳಿವೆ. ಇಂತಹವರಿದ್ದರೆ ಹೋರಾಟ ಕಷ್ಟ. ನನ್ನನ್ನು ಪ್ರತಿಪಕ್ಷದ ನಾಯಕನನ್ನಾಗಿ ಮಾಡಿ. ಸಿಟಿ ರವಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ. ಕೊನೆಗೆ ಹೈಕಮಾಂಡ್ ಯತ್ನಾಳ್ ಅವರಿಗೆ ದಯವಿಟ್ಟ ಸುಮ್ಮನಿರಿ, ಸ್ವಲ್ಪ ದಿನ ಕಳೆಯಲಿ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಇನ್ನೂ ಆರು ತಿಂಗಳಷ್ಟೇ ಆಗಿದೆ.. ಈಗಲೇ ತೆಗೆದರೆ ಪಕ್ಷಕ್ಕೆ ಡ್ಯಾಮೇಜ್ ಎಂದು ಹೇಳಿದೆಯಂತೆ. ಹೈಕಮಾಂಡ್ ಮಾತುಗಳು ಯಾವಾಗ ಕೂಲ್ ಆಗಿ ಬಂದವೋ, ಸ್ವಲ್ಪ ದಿನ ಅಡ್ಜಸ್ಟ್ ಮಾಡ್ಕೊಳ್ಳಿ ಎಂಬ ಮೆಸೇಜ್ ಸಿಕ್ಕಿತೋ.. ಯತ್ನಾಳ್ ಅವರು ಸೈಲೆಂಟ್ ಆಗಿದ್ದಾರೆ. ಅಂದರೆ ಅದರ ಅರ್ಥ ಇನ್ನೊಂದ್ ಐದಾರು ತಿಂಗಳಲ್ಲಿ ವಿಜಯೇಂದ್ರ ಎಕ್ಸಿಟ್ ಆಗ್ತಾರೆ ಅನ್ನೋ ಸಂಭ್ರಮದಲ್ಲಿದ್ದಾರೆ.
ಅಂದಹಾಗೆ ಹೈಕಮಾಂಡ್ ಅತ್ತ ಎಚ್ಚರಿಕೆಯನ್ನೂ ಕೊಡಲಾಗದ, ಇತ್ತ ಅಡ್ಜಸ್ಟ್ ಮಾಡಿಕೊಳ್ಳೋ ರೀತಿಯಲ್ಲಿ ಮಾತುಕತೆಯನ್ನೂ ನಡೆಸಲಾಗದ ಇಕ್ಕಟ್ಟಿನಲ್ಲಿ ಸಿಲುಕಿರೋದು ಯಾಕೆ..? ಒಂದಿಷ್ಟ ನಾಯಕರನ್ನು ಸುಮ್ಮನಿರಿ ಎಂದು ಹೇಳಲೂ ಆಗದ ಅಸಹಾಯಕತೆಗೆ ಬಂದಿರೋದು ಯಾಕೆ ಎಂದರೆ, ಎಲ್ಲರೂ ಬೈಎಲೆಕ್ಷನ್ನಿನತ್ತ ಕೈ ತೋರಿಸುತ್ತಾರೆ. ಆದರೆ, ಸದ್ಯಕ್ಕೆ ನಡೆಯುವ ಯಾವ ಚುನಾವಣೆಯಲ್ಲೂ ಯತ್ನಾಳ್ ತಂಡದ ಪ್ರಭಾವ ಕಾಣುತ್ತಿಲ್ಲವಲ್ಲ ಎಂದರೆ, ಉತ್ತರ ಕೊಡೋದಿಲ್ಲ. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ನಿಲುವು ಅರ್ಥ ಮಾಡಿಕೊಂಡವನೇ ಬುದ್ದಿವಂತ.