ಚನ್ನಪಟ್ಟಣಕ್ಕೆ ಮೈತ್ರಿ ಪಕ್ಷಗಳಲ್ಲಿ ಕ್ಯಾಂಡಿಡೇಟ್ ಯಾರು ಅನ್ನೋದಕ್ಕಿಂತ ಮೊದಲು, ಯಾವ ಪಕ್ಷದವರು ನಿಂತುಕೊಳ್ಳಬೇಕು ಎಂಬ ಪೈಪೋಟಿ ಶುರುವಾಗಿದೆ. ಅದರಲ್ಲೂ ಬಿಜೆಪಿ ಸಂಡೂರು, ಶಿಗ್ಗಾವಿ ಕ್ಷೇತ್ರಕ್ಕೆ ಸುಲಭವಾಗಿ ಅಭ್ಯರ್ಥಿ ಆಯ್ಕೆ ಮಾಡಿದ್ದಾಗಿದೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಕಗ್ಗಂಟಾಗಿರುವುದು ಚನ್ನಪಟ್ಟಣ. ಶತಾಯಗತಾಯ ತಾವು ಈ ಬಾರಿ ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದು ಹಂತದಲ್ಲಿ ಯೋಗೇಶ್ವರ್ ಅವರನ್ನು ಮನವೊಲಿಸಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಪ್ರಯತ್ನ ನಡೆಯಿತಾದರೂ, ಯೋಗೇಶ್ವರ್ ಬಗ್ಗಿಲ್ಲ. ಕೊನೆಗೆ ಕುಮಾರಸ್ವಾಮಿ ಯೋಗೇಶ್ವರ್ ಅವರೇ ತಮ್ಮ ಪಕ್ಷದ ಅಂದ್ರೆ ಜೆಡಿಎಸ್ ಅಭ್ಯರ್ಥಿಯಾಗಲಿ ಎಂದೂ ಹೇಳಿದ್ರಂತೆ. ಆದರೆ, ತಾವು ಸ್ಪರ್ಧಿಸುವುದಾದರೆ ಬಿಜೆಪಿ ಅಭ್ಯರ್ಥಿಯಾಗಿ ಮಾತ್ರ ಅಂತಿದ್ದಾರೆ ಯೋಗೇಶ್ವರ್.
ಇಲ್ಲಿ ಕುತೂಹಲ ಹುಟ್ಟಿಸಿರುವುದು ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ಹೇಳಿಕೆಗಳು. ಏಕೆಂದರೆ ಯಡಿಯೂರಪ್ಪ ಅವರು ಚನ್ನಪಟ್ಟಣ ಅಭ್ಯರ್ಥಿ ಯಾರು ಎಂದು ನಿರ್ಧಾರ ಮಾಡುವುದು ಕುಮಾರಸ್ವಾಮಿ, ನಾವಲ್ಲ. ಅಲ್ಲಿ ಅಖಾಡಕ್ಕೆ ಇಳಿಯುವುದು ಜೆಡಿಎಸ್ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್ನವರು ಯಾರಿಗೆ ಬೇಕೋ ಅವರಿಗೆ ಟಿಕೆಟ್ ನೀಡುತ್ತಾರೆ. ಈಗಾಗಲೇ ಅಮಿತ್ ಶಾ ಅವರೂ ಚೆನ್ನಪಟ್ಟಣದಲ್ಲಿ ಜೆಡಿಎಸ್ನವ್ರು ಘೋಷಣೆ ಮಾಡ್ತಾರೆ ಅಂದಿದ್ದಾರೆ. ಚೆನ್ನಪಟ್ಟಣ ಜೆಡಿಎಸ್ ಕ್ಷೇತ್ರ, ಅವರಿಗೆ ಯಾರು ಬೇಕೋ ಅವರ ಹೆಸರು ಘೋಷಣೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಸಿ.ಪಿ.ಯೋಗೇಶ್ವರ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತೋ ಅದರಂತೆ ಆಗಲಿದೆ. ಜೆಡಿಎಸ್ ಚಿಹ್ನೆಯಡಿ ಬಿಜೆಪಿಯವರು ನಿಲ್ಲುವ ಯೋಚನೆ ಇಲ್ಲ ಎಂದು ಕೂಡಾ ಹೇಳಿದ್ಧಾರೆ. ಅರ್ಥ ಮತ್ತು ಸಂದೇಶ ಸ್ಪಷ್ಟವಾಗಿದೆ. ಸಿಪಿ ಯೋಗೇಶ್ವರ್ ಅವರು ನಿಲ್ಲೋದಾದ್ರೆ ಬಿಜೆಪಿಯಿಂದ ಬಿಜೆಪಿ ಟಿಕೆಟ್ಟಿನಲ್ಲೇ ನಿಲ್ತಾರೆ, ಮಿತ್ರ ಪಕ್ಷವಾಗಿರುವ ಜೆಡಿಎಸ್ ನವರಿಗೆ ಅಧಿಕಾರ ಇದೆ. ಅವರು ಬಿಟ್ಟುಕೊಡಬೇಕು ಎಂಬ ಸಂದೇಶ ನೀಡಿದಂತಿದೆ.
ಆದರೆ ಕುಮಾರಸ್ವಾಮಿ ಅವರಿಗೆ ಪಕ್ಷದ ಅಸ್ಥಿತ್ವ ಬಿಟ್ಟುಕೊಡೋ ಮನಸ್ಸಿಲ್ಲ. ಸಿಪಿ ಯೋಗೇಶ್ವರ್ ಅವರೇ ನಿಲ್ಲೋದಾದ್ರೆ ನಿಲ್ಲಲಿ. ಟಿಕೆಟ್ ಕೊಡೋಣ ಎಂದು ಹೇಳಿದ ಬಳಿಕವೂ ಸಿಪಿ ಯೋಗೇಶ್ವರ್ ಯಾವಾಗ ತಾನು ನಿಲ್ಲೋದಾದ್ರೆ ಬಿಜೆಪಿ ಟಿಕೆಟ್ʻನಲ್ಲೇ ನಿಲ್ತೇನೆ ಎಂದರೋ, ಕುಮಾರಸ್ವಾಮಿ ಗೇರ್ ಬದಲಿಸಿದ್ದಾರೆ.
ಯೋಗೇಶ್ವರ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಎರಡು ಸಲ ಭೇಟಿಯಾಗಿ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ಯಾವ ಕಾರಣಕ್ಕಾಗಿ ಕಾಂಗ್ರೆಸ್ ನಾಯಕರನ್ನು ಭೇಟಿಯಾದರು ಎಂಬುದು ನನಗೆ ಬೇಕಾಗಿಲ್ಲ ಎಂದಿರೋ ಕುಮಾರಸ್ವಾಮಿ ಯೋಗೇಶ್ವರ್ ಅವರ ಕಾಂಗ್ರೆಸ್ ನಾಯಕರ ಜೊತೆಗೂ ಸಂಪರ್ಕದಲ್ಲಿದ್ದಾರೆ. ಜೊತೆಗೆ ಬೇರೆ ಬೇರೆ ಪಕ್ಷಗಳ ನಾಯಕರೊಂದಿಗೂ ಚರ್ಚೆಯಲ್ಲಿದ್ದಾರೆ. ಈ ಬಗ್ಗೆ ಎಲ್ಲೆಡೆಯೂ ಮಾತುಕತೆಗಳು ನಡೆಯುತ್ತಿವೆ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ ಎಂದಿದ್ದಾರೆ.
ಅಷ್ಟೇ ಅಲ್ಲ, ಹೇಗಾದ್ರೂ ಮಾಡಿ ಈ ಕುಮಾರಸ್ವಾಮಿಯ ವರ್ಚಸ್ಸು ತಗ್ಗಿಸಬೇಕು ಎಂದು ಕೆಲವು ನಾಯಕರ ಉದ್ದೇಶ. ನಾನು ಎಲ್ಲ ಬಿಜೆಪಿ ನಾಯಕರ ಬಗ್ಗೆ ಹೀಗೆ ಹೇಳುತ್ತಿಲ್ಲ. ಕೆಲವರಿಗಂತೂ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಜೀರ್ಣಿಸಿಕೊಳ್ಳಲೂ ಆಗುತ್ತಿಲ್ಲ ಎಂದು ದೂರಿದ್ದಾರೆ.
ಸದ್ಯ ಚನ್ನಪಟ್ಟಣ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರೇ ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ನೀವೇ ನಿರ್ಧಾರ ತೆಗೆದುಕೊಳ್ಳುವಂತೆ ನಮಗೆ ಬಿಟ್ಟಿದ್ದಾರೆ. ಈಗಾಗಲೇ ಚನ್ನಪಟ್ಟಣವು ಜೆಡಿಎಸ್ ಕ್ಷೇತ್ರ ಎನ್ನುವುದೂ ಎಲ್ಲರಿಗೆ ಗೊತ್ತಿದೆ.
ನನಗೆ ದೆಹಲಿ ಮಟ್ಟದಲ್ಲಿ ಉತ್ತಮ ಸಂಪರ್ಕವಿದೆ. ಹೀಗಾಗಿ ಏನಾದರೂ ಸಮಸ್ಯೆ ಸೃಷ್ಟಿ ಮಾಡಬೇಕು ಎಂದು ಬಿಜೆಪಿಯ ಕೆಲ ನಾಯಕರು ಮುಂದಾಗಿದ್ದಾರೆ. ಈ ಬಗ್ಗೆ ಹಲವರು ಮಾತಾಡಿಕೊಳ್ಳುತ್ತಿರುವ ಬಗ್ಗೆ ನನ್ನ ಕಿವಿಗೂ ಬಿದ್ದಿದೆ. ನಮ್ಮ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಹುಳಿ ಹಿಂಡಬೇಕು ಎಂದೇ ಕೆಲವರು ಇದ್ದಾರೆ. ಅವರ ಉದ್ದೇಶ ಈ ಕುಮಾರಸ್ವಾಮಿಯನ್ನ ಮಟ್ಟ ಹಾಕುವುದು. ಹುಳಿ ಹಿಂಡೋರು ನಮ್ಮ ಪಕ್ಷದಲ್ಲಂತೂ ಇಲ್ಲ. ಆದರೆ ಹುಳಿ ಹಿಂಡುವವರು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ. ಇದು ನನಗೂ ಗೊತ್ತಿದೆ. ಆದರೆ ಅವರ ಪ್ರಯತ್ನ ಫಲಿಸಲ್ಲ ಎಂದೂ ಹೇಳಿದ್ದಾರೆ. ಒಟ್ಟಿನಲ್ಲಿ ಚನ್ನಪಟ್ಟಣ ಚಕ್ರವ್ಯೂಹದಲ್ಲಿ ಗೆಲ್ಲೋದಿರಲಿ, ಎಂಟ್ರಿ ಕೊಡೋರ್ ಯಾರು ಅನ್ನೋದೇ ಫೈನಲ್ ಆಗಿಲ್ಲ.