ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರಪ್ರದೇಶದ ಕಾಶಿ ಜ್ಞಾನಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರಿಂದ ರಷ್ಯಾದ ಮಾಸ್ಕೋ ನಿವಾಸಿ ಪಾರ್ವತಿ ಎಂಬುವವರ ಪುತ್ರ ಆ್ಯಂಡ್ರೆ ಎಂಬ 8 ವರ್ಷದ ಬಾಲಕ ಸೋಮವಾರ ಕಾಶಿಯಲ್ಲಿ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿ ಗಮನ ಸೆಳೆದಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಹಿಂದೆ ವೀರಶೈವ ಧರ್ಮ ಸಿದ್ಧಾಂತ ಸ್ವೀಕರಿಸಿ ಇಷ್ಟಲಿಂಗ ದೀಕ್ಷೆ ಹೊಂದಿದ್ದ ರಷ್ಯಾದ ಪಾರ್ವತಿ ಎಂಬುವವರು ನಿತ್ಯವೂ ಅವರ ಮನೆಯಲ್ಲಿ ಇಷ್ಟಲಿಂಗ ಪೂಜೆ ಸಾಂಗಾವಾಗಿ ನೆರವೇರಿಸುತ್ತಿದ್ದು, ಇದರಿಂದ ಪ್ರಭಾವಿತನಾದ ಬಾಲಕ ಆ್ಯಂಡ್ರೆ, ತನಗೂ ಇಷ್ಟಲಿಂಗ ದೀಕ್ಷೆ ಬೇಕೆಂದು ಉತ್ಕಟ ಇಚ್ಚೆ ತೋರಿದ್ದರಿಂದ ಪಾಲಕರು ಕಾಶಿ ಪೀಠದಲ್ಲೇ ಇಷ್ಟಲಿಂಗ ದೀಕ್ಷೆ ಕೊಡಿಸಿದ್ದಾರೆ. ಆಂಡ್ರೂ ಈಗ ಗಣೇಶ ನಾಗಿದ್ದಾನೆ.
ಮಹಾರಾಷ್ಟ್ರ ರಾಜ್ಯದ ದಹಿವಡಕರ ಹಿರೇಮಠದ ಶ್ರಿಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಬಾಲಕ ಆ್ಯಂಡ್ರೆಗೆ ಮಂತ್ರೋಪದೇಶ ಮಾಡಿದರು. ರಷ್ಯಾದಿಂದ ಆಗಮಿಸಿದ್ದ ಬಾಲಕ ಆ್ಯಂಡ್ರೆ ಪಾಲಕರು ಹಾಗೂ ಬಂಧುಗಳು ಇದ್ದರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಹಿಂದೆ ಸಹಸ್ರಾರು ಜನರು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದರು.